ADVERTISEMENT

ದೀಪ ತ್ರಾಟಕ-ಸರಳ ತ್ರಾಟಕ

ಗೋಪಾಲಕೃಷ್ಣ ದೇಲಂಪಾಡಿ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ದೀಪ ತ್ರಾಟಕ-ಸರಳ ತ್ರಾಟಕ
ದೀಪ ತ್ರಾಟಕ-ಸರಳ ತ್ರಾಟಕ   

ಯಾವುದಾದರೂ ಒಂದು ವಸ್ತುವನ್ನು ಎವೆಯಿಕ್ಕದೆ ನೋಡುತ್ತಾ ಕಣ್ಣುಗಳಿಗೆ ವ್ಯಾಯಾಮ ಕೊಟ್ಟು, ಕಣ್ಣುಗಳನ್ನು ಶುಚಿಗೊಳಿಸುವುದೇ ತ್ರಾಟಕ. ತ್ರಾಟಕ ಎಂದರೆ ‘ನೋಡು’ ಅಥವಾ ದಿಟ್ಟಿಸು ಎಂದರ್ಥ. ಶಾರೀರಿಕ ಅಭ್ಯಾಸಗಳು (ಯೋಗಾಸನಗಳು) ಮತ್ತು ಪ್ರಜ್ಞೆಯನ್ನು ಉನ್ನತ ಸ್ಥಿತಿಗೆ ಒಯ್ಯುವ ಮಾನಸಿಕ ಅಭ್ಯಾಸಗಳ ನಡುವೆ ಇದು ಸೇತುವೆಯಂತೆ ಇದೆ.

ದೀಪ ತ್ರಾಟಕ: ಒಮ್ಮೆ ಕಣ್ಣು ಮುಚ್ಚಿ ಇದೇ ದೇಹವನ್ನು ಮುಖ್ಯವಾಗಿ ಕಣ್ಣುಗಳಲ್ಲಿ ಯಾವುದೇ ಬಿಗಿತವಿದ್ದಲ್ಲಿ ಸಡಿಲಿಸಿ. ದೇಹವು ದೃಢವಾಗಿರುವ ಬಗ್ಗೆ ಕೆಲವು ನಿಮಿಷಗಳವರೆಗೆ ಗಮನ ಹರಿಸಿ, ಅಭ್ಯಾಸದ ಆದ್ಯಂತವೂ ದೇಹ ನಿಶ್ಚಲವಾಗಿರಲಿ.

ಈಗ ಕಣ್ಣುಗಳನ್ನು ತೆರೆದು ಬತ್ತಿಯ ತುದಿಯನ್ನು ಏಕಾಗ್ರತೆಯಿಂದ ದೃಷ್ಟಿಸಬೇಕು. ಕಣ್ಣುಗಳನ್ನು ಮಿಟುಕಿಸಬಾರದು. ಕಣ್ಣುಗುಡ್ಡೆಗಳು ಚಲಿಸಬಾರದು. ಬತ್ತಿಯ ಮೇಲೆ ಗಮನ ಹರಿಸಬೇಕು. ಈ ಸಂದರ್ಭದಲ್ಲಿ ದೇಹದ ಪರಿವೆಯೇ ಇಲ್ಲದಂತಾಗಲಿ.

ADVERTISEMENT

ಪದ್ಮಾಸನ, ವಜ್ರಾಸನ ಅಥವಾ ಸುಖಾಸನದಲ್ಲಿ ನೆಟ್ಟಗೆ ನೇರವಾಗಿ ಹಾಯಾಗಿ ಕುಳಿತುಕೊಳ್ಳಬೇಕು. ಒಂದು ಮೀಟರ್ ದೂರದಲ್ಲಿ ಉರಿಯುವ ದೀಪ ಇಡಬೇಕು ಕಣ್ಣಿನ ರೆಪ್ಪೆಗಳನ್ನು ಮುಚ್ಚದೆ ದೀಪವನ್ನು ನೆಟ್ಟ ದೃಷ್ಟಿಯಿಂದ ನೋಡಬೇಕು. ಕಣ್ಣುಗಳನ್ನು ಅಲುಗಾಡಿಸಬೇಡಿ, ಮಿಟುಕಿಸಲೂ ಬೇಡಿ. ಕಣ್ಣುಗಳಲ್ಲಿ ಉರಿಯುಂಟಾಗಿ ನೀರು ಸುರಿಯುತ್ತದೆ. ಆದರೂ ಅಭ್ಯಾಸ ನಡೆಸಬೇಕು. ಈ ಕ್ರಿಯೆಯನ್ನು ಕನಿಷ್ಟ 10 ಸೆಕೆಂಡುಗಳಿಂದ ಪ್ರಾರಂಭಿಸಿ ಅನಂತರ ಹೆಚ್ಚಿಸಬೇಕು.

ಪ್ರಯೋಜನಗಳು: ತ್ರಾಟಕ ಅಭ್ಯಾಸ ಮಾಡುವುದರಿಂದ ಕಣ್ಣುಗಳು ಸ್ವಚ್ಛವಾಗುತ್ತವೆ. ಮತ್ತು ಪ್ರಕಾಶಮಾನವಾಗುತ್ತವೆ. ಇದು ನರಗಳ ಆತಂಕ ಬಿಗುವು, ಖಿನ್ನತೆ ಹಾಗೂ ನಿದ್ರಾಹೀನತೆಗಳನ್ನು ನಿವಾರಿಸಿ ನರಮಂಡಲ ವ್ಯವಸ್ಥೆಯಲ್ಲಿ ಸಮತೋಲನ ಉಂಟು ಮಾಡುತ್ತದೆ. ಇದು ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ಉತ್ತಮ ಏಕಾಗ್ರತೆ ಹಾಗೂ ದೃಢ ಸಂಕಲ್ಪ ಶಕ್ತಿಯನ್ನು ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ. ಇದು ಆಜ್ಞಾ ಚಕ್ರವನ್ನು ಚುರುಕುಗೊಳಿಸುತ್ತದೆ. ಮತ್ತು ಧ್ಯಾನಕ್ಕೆ ಇದು ಅತ್ಯುತ್ತಮ ಪೂರ್ವ ಸಿದ್ಧತೆಯಾಗಿದೆ.

ನಿಷೇಧಗಳು:‌ ಅಪಸ್ಮಾರ ಇರುವವರು ಬತ್ತಿಯ ಜ್ವಾಲೆಯನ್ನು ತ್ರಾಟಕದ ಅಭ್ಯಾಸಕ್ಕೆ ಬಳಸಬಾರದು.

ಸಾಮಾನ್ಯವಾಗಿ ತ್ರಾಟಕ ಅಭ್ಯಾಸಕ್ಕೆ ಯಾವ ವಸ್ತುವನ್ನೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಚಂದ್ರ ಸ್ಪಟಿಕದ ಚೆಂಡು, ಕನ್ನಡಿ ಅಥವಾ ಕತ್ತಲೆಯನ್ನು ಕೇಂದ್ರವಾಗಿಟ್ಟುಕೊಳ್ಳುವುದು ಒಳ್ಳೆಯದಲ್ಲ. ತ್ರಾಟಕ ಅಭ್ಯಾಸಕ್ಕೆ ಆಯ್ಕೆ ಮಾಡಿಕೊಂಡ ವಸ್ತುವನ್ನು ಪದೇಪದೇ ಬದಲಾಯಿಸುವುದು ಸಲ್ಲದು.

ತ್ರಾಟಕ ಕ್ರಿಯೆಯನ್ನು ಆರಂಭದಲ್ಲಿ 1 ರಿಂದ 2 ನಿಮಿಷದವರೆಗೆ ಅಭ್ಯಾಸ ಮಾಡಬೇಕು. ಅನಂತರ 10 ರಿಂದ 15 ನಿಮಿಷ ಹೆಚ್ಚಿಸಬಹುದು. ನಿದ್ರಾಹೀನತೆ ಮಾನಸಿಕ ಸಮಸ್ಯೆಯಿಂದ ಬಳಲುವವರಿಗೆ ಈ ತ್ರಾಟಕ ಕ್ರಿಯೆಯು ಸಹಕಾರಿಯಾಗುತ್ತದೆ. ಆಸನ ಪ್ರಾಣಯಾಮದ ಮೊದಲು ತ್ರಾಟಕ ಅಭ್ಯಾಸ ಮಾಡಬೇಕು.

ಈ ಅಭ್ಯಾಸಗಳನ್ನು ಮಾಡುವಾಗ ಮನಸ್ಸು ಸಂಪೂರ್ಣ ನಿರಾಂತಂಕವಾಗಿರಬೇಕಾದುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.