ರಾಸಾಯನಿಕ ಕೃಷಿಯನ್ನು, ಅದರ ಹಿಂದಿರುವ ಟೊಳ್ಳು ವಿಜ್ಞಾನವನ್ನು ಧಿಕ್ಕರಿಸಿ, ಸಾವಯವ ಕೃಷಿಗೆ ಮಾದರಿ ಎನ್ನುವಂತೆ ಬದುಕು ನಡೆಸುತ್ತಿರುವವರು ಡಾ. ನಾರಾಯಣ ರೆಡ್ಡಿ. ದೊಡ್ಡಬಳ್ಳಾಪುರ ತಾಲ್ಲೂಕು ಸೋರಹುಣಸೆ ಗ್ರಾಮದ ಅವರು ಓದಿದ್ದು 2ನೇ ತರಗತಿ. ಆದರೆ ರೆಡ್ಡಿಯವರ ತೋಟ, ಮನೆ ಹಾಗೂ ಪರಿಶ್ರಮ ಸಾವಯವ ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುರುಕುಲವೆಂದೇ ಗುರುತಿಸಲ್ಪಟ್ಟಿದೆ.
ರಾಸಾಯನಿಕಗಳಿಂದ ಮಣ್ಣು ಬಹುಬೇಗನೆ ಸತ್ವ ಕಳೆದುಕೊಳ್ಳುತ್ತದೆ ಎಂಬುದನ್ನು ಮನಗಂಡ ನಾರಾಯಣ ರೆಡ್ಡಿ ಅವರು ಬಹುಕಾಲದಿಂದ ಪಾರಂಪರಿಕ ಕೃಷಿ ಪದ್ಧತಿಯನ್ನೇ ಅಪ್ಪಿಕೊಂಡವರು. ಕೃಷಿ ವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಹಾಗೂ ತುಲನಾತ್ಮಕವಾಗಿ ಅಧ್ಯಯನವನ್ನೂ ನಡೆಸಿದ್ದಾರೆ. ನಾರಾಯಣ ರೆಡ್ಡಿ ಅವರ ಕೌಶಲ ಕಂಡು ವಿನ್ಸೆಂಟೊ ಮುಂತಾದ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಇಲ್ಲಿ ಕಳುಹಿಸಿಕೊಡುತ್ತವೆ.
ಸಾವಯವ ಕೃಷಿಗೆ ಸಂಬಂಧಿಸಿದಂತೆ ಆಸಕ್ತರಿಗೆ ಶಿಬಿರಗಳನ್ನೂ ಇವರು ನಡೆಸುತ್ತಾರೆ. ಸರಳ ಜೀವನ ಕ್ರಮಕ್ಕೆ ಹೆಚ್ಚು ಒತ್ತು ಕೊಡುವ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಈ ತಿಂಗಳ ಅತಿಥಿಯಾಗಿ ಶನಿವಾರ (ಡಿ.16) ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.