‘ರಾಜರು’ ಚಿತ್ರದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಮಾಧ್ಯಮದವರ ಮುಂದೆ ಒಂದು ಟ್ರೇಲರ್ ಪ್ರದರ್ಶನವನ್ನೂ ನಡೆಸಿತು.
‘ರಾಜರು’ ಎಂದಾಕ್ಷಣ ಹಳೇ ಕಾಲದ ಸೆಟ್ ಇರುತ್ತದೆ ಅಂದುಕೊಳ್ಳುವಂತಿಲ್ಲ. ಅರಮನೆ, ಆಳುಕಾಳು ಇಲ್ಲಿಲ್ಲ. ಇದು ಪಕ್ಕಾ ಈ ಕಾಲದ್ದೇ ಚಿತ್ರ. ಗಿರೀಶ್ ಮೂಲಿಮನಿ ನಿರ್ದೇಶಕರು. ತಾಳಗುಪ್ಪದ ಗಿರೀಶ್ ಅವರ ಮೊದಲ ನಿರ್ದೇಶನ.
ಹಿಂದೆ ತಾಳಗುಪ್ಪದಲ್ಲಿ ರಾಜರು ವಾಸವಾಗಿದ್ದ ಕಥೆಯನ್ನು ಸಿನಿಮಾ ಮಾಡುವುದೆಂದು ನಿರ್ಧರಿಸಿದಾಗ ಅವರಿಗೆ ಕೃಷ್ ರಂಗಸ್ವಾಮಿ ಅವರು ಬರೆದ ಕಥೆಯೂ ಸಿಕ್ಕಿತಂತೆ. ನಾಲ್ಕು ಹುಡುಗರು ಒಬ್ಬಳೇ ಹುಡುಗಿಯ ಹಿಂದೆ ಬೀಳುತ್ತಾರೆ. ಆದರೆ ಸಕಾರಾತ್ಮಕ ಅಂಶಗಳನ್ನು ತೋರಿಸುವುದು ನಿರ್ದೇಶಕರ ಉದ್ದೇಶ.
ನಿರಂಜನ್ಶೆಟ್ಟಿ, ಜಗದೀಶ್, ನಾಗರಾಜ್ ಹಾಗೂ ಶರಣ್ ಚಿತ್ರದ ನಾಯಕರು. ಇವರೆಲ್ಲರಿಗೂ ಒಬ್ಬಳೇ ನಾಯಕಿ ಶಾಲಿನಿ. ವಿ. ಶ್ರೀಧರ್ ಸಂಭ್ರಮ್ ಸಂಗೀತಕ್ಕೆ ಜಯಂತ ಕಾಯ್ಕಣಿ, ನಾಗೇಂದ್ರಪ್ರಸಾದ್, ಯೋಗರಾಜ್ ಭಟ್ ಹಾಡು ಬರೆದಿದ್ದಾರೆ. ಅರ್ಮಾನ್ ಮಲ್ಲಿಕ್, ಶ್ರೇಯಾ ಘೋಷಾಲ್, ಶಶಾಂಕ್ ಶೇಷಗಿರಿ ಹಾಡಿದ್ದಾರೆ.
ಸಿನಿಟೆಕ್ ಸೂರಿ ಛಾಯಾಗ್ರಹಣ, ವಿಶ್ವ ಅವರ ಸಂಕಲನ ಚಿತ್ರಕ್ಕಿದೆ. ಮೂರ್ತಿ, ರಮೇಶ್, ಚಂದ್ರಶೇಖರ್, ಶಿವಕುಮಾರ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.