ADVERTISEMENT

ಹಬ್ಬಕ್ಕೆ ಬಂಪರ್‌ ಆಫರ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ರಾಜಸ್ತಾನಿ ಗ್ರಾಮೀಣ ಮೇಳದ ನೋಟ
ರಾಜಸ್ತಾನಿ ಗ್ರಾಮೀಣ ಮೇಳದ ನೋಟ   

ಹಬ್ಬ ಸಮೀಪಿಸುತ್ತಿದೆ ಎನ್ನುತ್ತಿದ್ದಂತೆ ಹೊಸ ವಸ್ತುಗಳನ್ನು ಕೊಂಡು ತರುವ ಸಂಭ್ರಮ ಶುರುವಾಗುತ್ತದೆ. ಅದರಲ್ಲಿಯೂ ಬಟ್ಟೆ, ಒಡವೆಗಳನ್ನು ಕೊಳ್ಳುವಾಗಲಂತೂ ಸಡಗರ ಮತ್ತಷ್ಟು ಹೆಚ್ಚುತ್ತದೆ.

ಕಂಡ ಕಂಡ ವಸ್ತುಗಳನ್ನೆಲ್ಲ ಕೊಳ್ಳುವ ಬಯಕೆ. ಆದರೆ ಜೇಬಿಗೆ ಕತ್ತರಿ ಬೀಳಬಹುದು ಎಂಬ ಹಿಂಜರಿಕೆ ಇರುವವರಿಗೆ ಹಬ್ಬಗಳು ಬಂಪರ್‌ ಉಡುಗೊರೆ ನೀಡುತ್ತವೆ. ಅದರಲ್ಲಿಯೂ ಯುಗಾದಿ ಹಬ್ಬಕ್ಕೆ ಈ ಕೊಡುಗೆ ತುಸು ಹೆಚ್ಚೇ ಎನ್ನಬಹುದು.

ಬೀದಿ ಬದಿ ಅಂಗಡಿಯಿಂದ ಹಿಡಿದು ಮಾಲ್‌ಗಳಲ್ಲಿಯೂ ರಿಯಾಯಿತಿ ಬೆಲೆಯಲ್ಲಿ  ವಸ್ತುಗಳು ಲಭ್ಯವಿವೆ.

ADVERTISEMENT

‘ನಮ್ಮ ಯುಗಾದಿಗೆ ನಮ್ಮೂರ ವಸ್ತ್ರಾಭರಣಗಳು’ ಎಂಬ ಹೆಸರಿನಲ್ಲಿ ಗ್ರಾಮೀಣ ಅಂಗಡಿ ಈ ಬಾರಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಿದೆ. ಇಲ್ಲಿ ಕೈಮಗ್ಗ ಸೀರೆಗಳು,  ಉಡುಪಿಯ ಹ್ಯಾಂಡ್‌ಲೂಮ್‌ ಸೀರೆ, ಮಕ್ಕಳಿಗಾಗಿ ಹತ್ತಿ  ಉಡುಪುಗಳು, ಖಾದಿ ಜುಬ್ಬಾ, ಪೈಜಾಮ ಹೀಗೆ ಹಲವು ಬಗೆಯ ಉಡುಪುಗಳಿವೆ. ಜೊತೆಗೆ ಟೆರಾಕೋಟ ಆಭರಣ, ಕರಕುಶಲ ವಸ್ತುಗಳು, ಪೂಜಾ ಸಾಮಗ್ರಿ, ಸಾವಯವ ಸಿರಿಧಾನ್ಯಗಳೂ ಇವೆ. ವಸ್ತುಗಳ ಮೇಲೆ ಶೇ 10ರಿಂದ 30ರವರೆಗೆ ರಿಯಾಯಿತಿ ದರ ಘೋಷಿಸಿದೆ.

(ಜೀಜಿ ಕೆ. ಮ್ಯಾಥ್ಯು)

‘ಗ್ರಾಮೀಣ ಸೊಗಡಿನ ಮೂಲಕ ಹಬ್ಬವನ್ನು ಜನರು ಸವಿಯಬೇಕು. ರಿಯಾಯಿತಿ ನೀಡುವುದರಿಂದ ಜನರು ವಸ್ತುಗಳನ್ನು ಕೊಳ್ಳುತ್ತಾರೆ. ಈ ಬಾರಿ ವಸ್ತುಗಳು ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಅಂಗಡಿಯ ರಾಜಶೇಖರಮೂರ್ತಿ.

ರಾಜಾಜಿನಗರ ಮತ್ತು ಶ್ರೀನಗರಗಳಲ್ಲಿ ಗ್ರಾಮೀಣ ಅಂಗಡಿಗಳಿವೆ. ಏ.30ರವರೆಗೆ  ವಿಶೇಷ ರಿಯಾಯಿತಿ ಇದೆ. 

ಹಬ್ಬ ಎಂದಾಕ್ಷಣ ನೆನಪಾಗುವುದು ಜರಿ ಸೀರೆ. ಸಾಂಪ್ರದಾಯಿಕ ನೋಟ ನೀಡುವ ಇದಕ್ಕೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿಯೇ ಜಯನಗರದ ‘ಶಮಿಕಾ ಬೊಟಿಕ್‌’, ಜಯನಗರದ ವಿಜಯಲಕ್ಷ್ಮೀ ಸಿಲ್ಕ್ಸ್‌ ಆ್ಯಂಡ್‌ ಸ್ಯಾರೀಸ್‌ನಲ್ಲಿ ಜರಿ ಸೀರೆಗಳು ಶೇ. 40ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿವೆ. ಎಂ.ಜಿ. ರಸ್ತೆಯ ದೀಪಂ ಮಳಿಗೆ, ಮೆಜೆಸ್ಟಿಕ್‌ನಲ್ಲಿರುವ ಕಾಂಚಿಪುರಂ ಎಸ್‌ಎಂ ಸಿಲ್ಕ್ಸ್ ಆ್ಯಂಡ್‌ ಸ್ಯಾರೀಸ್‌ನಲ್ಲಿ ಬಂಪರ್‌ ಆಫರ್‌ಗಳು ಲಭ್ಯ. ಸುದರ್ಶನ್‌ ಸಿಲ್ಕ್ಸ್‌, ದೀಪಂ ಸಿಲ್ಕ್ಸ್‌, ಕೆಎಸ್‌ಐಸಿ, ಹೆಬ್ಬಾಳದ ವಿವೇಕಾನಂದ ಸ್ಯಾರೀಸ್‌, ಮೈಸೂರು ಸಿಲ್ಕ್ಸ್‌ ಹೀಗೆ ನಗರದ ಹಲವು ಪ್ರಮುಖ ಸೀರೆ ಅಂಗಡಿಗಳಲ್ಲಿ ಹಬ್ಬದ ರಿಯಾಯಿತಿ ಇದೆ.

ಆಭರಣ ಪ್ರಿಯರಿಗಾಗಿಯೇ ನಗರದ ಪ್ರಮುಖ ಆಭರಣ ಮಳಿಗೆಗಳು ವಿಶೇಷ ಕೊಡುಗೆಗಳನ್ನು ನೀಡುತ್ತಿವೆ. ಜೋಯಾಲುಕ್ಕಾಸ್‌ ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯ ನೀಡಿದೆ. 

‘₹30 ಸಾವಿರ ಮುಖಂಡ ಕಾಯ್ದಿರಿಸಿದರೆ ಮುಂದಿನ ತಿಂಗಳು ಆಭರಣದ ಬೆಲೆ ಹೆಚ್ಚಾದರೂ ಈಗಿನ ಬೆಲೆಗೆ ಒಡವೆ ನೀಡುತ್ತೇವೆ. ಜೊತೆಗೆ ಪ್ರತಿ ₹30ಸಾವಿರಕ್ಕೆ ಒಂದು ಬಂಗಾರದ ನಾಣ್ಯವನ್ನು ಕೊಡುಗೆಯಾಗಿ ನೀಡುತ್ತೇವೆ. ಹಳೆ ಬಂಗಾರವನ್ನು ಕೊಡುವವರಿಗೆ ಯಾವುದೇ ಕಡಿತ(ಡಿಡಕ್ಷನ್) ಮಾಡದೆ ಹಣವನ್ನು ನೀಡುತ್ತೇವೆ’ ಎನ್ನುತ್ತಾರೆ ಜೋಯಾಲುಕ್ಕಾಸ್‌ನ ಮಾರುಕಟ್ಟೆ ವ್ಯವಸ್ಥಾಪಕ ಜೀಜಿ ಕೆ. ಮ್ಯಾಥ್ಯು.

‘ದುಬೈ ಬೆಲೆಗೆ ಇಲ್ಲಿ ಒಡವೆಗಳನ್ನು ನೀಡುತ್ತೇವೆ. ಹಳೆ ಚಿನ್ನ ಕೊಡುವವರಿಗೆ ಒಂದು ಗ್ರಾಂಗೆ ₹125 ಹೆಚ್ಚು ಕೊಡುತ್ತೇವೆ.  ಒಂದು ಕ್ಯಾರೆಟ್‌ ವಜ್ರದ ಆಭರಣದ ಮೇಲೆ ₹5 ಸಾವಿರ ರಿಯಾಯಿತಿ, ಎರಡು ಕೆ.ಜಿ ಬೆಳ್ಳಿ ಆಭರಣದ ಮೇಲೆ ₹1,000 ರಿಯಾಯಿತಿ ಇದೆ’ ಎನ್ನುತ್ತಾರೆ ಸಾಯಿ ಗೋಲ್ಡ್‌ ಪ್ಯಾಲೇಸ್‌ನ  ಶರವಣ.

ಕೀರ್ತಿಲಾಲ್ಸ್‌ ಎಲ್ಲಾ ವಜ್ರದ ಆಭರಣದ ಮೇಲೆ ಪ್ರತಿ ಕ್ಯಾರೆಟ್‌ಗೆ ₹10 ಸಾವಿರ ತನಕ ರಿಯಾಯಿತಿ ನೀಡಿದೆ.  ಸ್ವರ್ಣ, ಖಜಾನಾ, ಮಲಬಾರ್‌ ಆಭರಣ ಅಂಗಡಿಗಳಲ್ಲೂ ಹಬ್ಬದ ರಿಯಾಯಿತಿ ಇದೆ.

***

ಯುಗಾದಿ ಮೇಳ
ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ (ಸಿಸಿಐಸಿಐ) ಕರಕುಶಲ ವಸ್ತುಗಳು ಮತ್ತು ಕೈಮಗ್ಗದ ಜವಳಿಗಳ ಮಾರಾಟ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಕಾಟೇಜ್‌ ಯುಗಾದಿ ಮೇಳ ಎಂಬ ಹೆಸರಿನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್‌ 20ರವರೆಗೆ ಮೇಳ ನಡೆಯಲಿದೆ.  

ಇಲ್ಲಿ ಆಭರಣ, ಲೋಹದ ಕಲಾ ವಸ್ತುಗಳು, ಮರದ ಕೆತ್ತನೆ, ಕರಕುಶಲ ವಸ್ತು, ಅಮೃತಶಿಲೆಯ ಕಲಾತ್ಮಕ ವಸ್ತುಗಳು, ಉಡುಪುಗಳು, ಬೆಡ್‌ಸ್ಪ್ರೆಡ್‌, ಕಾಶ್ಮೀರಿ ಶಾಲು, ಜಾಕೆಟ್‌, ಲಖ್ನೋವಿ ಕಸೂತಿ ಕುರ್ತಾ ಮತ್ತು ಸೀರೆಗಳು, ಕಾನ್ಪುರ ಟೇಬಲ್‌ ಲಿನೆನ್‌ ಮತ್ತು ಬೆಡ್‌ಸ್ಪ್ರೆಡ್‌ಗಳು ಪ್ರದರ್ಶನಕ್ಕಿವೆ. ಈ ಮೇಳ ಬಿ.ಆರ್‌.ಅಂಬೇಡ್ಕರ್‌ ವೀಧಿಯಲ್ಲಿರುವ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್‍್ಸ್ನಲ್ಲಿ ನಡೆದಿದೆ.

ಜಯನಗರ ಅಶೋಕ ಪಿಲ್ಲರ್‌ ಬಳಿಯ ಪ್ರೇಮಚಂದ್ರಸಾಗರ್‌ ಕಲ್ಯಾಣ ಮಂಟಪದಲ್ಲಿ ಒರಿಸ್ಸಾ  ಗ್ರಾಮೀಣ ಮೇಳ ಆಯೋಜಿಸಲಾಗಿದೆ. ಇಲ್ಲಿ ಹ್ಯಾಂಡ್‌ಲೂಂ, ಕಾಟನ್‌ ಸೀರೆಗಳು ಮತ್ತು ಕರಕುಶಲ ವಸ್ತುಗಳು ದೊರಕುತ್ತವೆ.

ಸಮಯ: ಬೆಳಿಗ್ಗೆ 10.30ರಿಂದ 8.30.
ಸಾಮಾನ್ಯ ದರಕ್ಕಿಂತ ಸ್ವಲ್ಪವಾದರೂ ಕಡಿಮೆ ದರದಲ್ಲಿ ಗುಣಮಟ್ಟದ ಬಟ್ಟೆಗಳನ್ನು, ಒಡವೆಗಳನ್ನು ಖರೀದಿಸಲು ಹಬ್ಬ ಸುಸಂದರ್ಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.