ಪಣಜಿ (ಐಎಎನ್ಎಸ್): ಶುಕ್ರವಾರ ಕಾಂಗ್ರೆಸ್ ತೊರೆದ ಹಿರಿಯ ನಾಯಕಿ ಜಯಂತಿ ನಟರಾಜನ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಶುಕ್ರವಾರ ರಾತ್ರಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಗೋವಾದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಮುಂದಾಗಿದ್ದೇ ತಮ್ಮ ತಲೆ ದಂಡಕ್ಕೆ ಕಾರಣ ಎಂದು ಹೇಳಿದರು.
‘ಸಾಕಷ್ಟು ಒತ್ತಡ ಇದ್ದರೂ ಗೋವಾದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೆ. ಸಾಕಷ್ಟು ಕಂಪೆನಿಗಳಿಗೆ ಪರಿಸರ ಅನುಮತಿ ನಿರಾಕರಿಸಿದ್ದೆ. ಗೋವಾದಲ್ಲಿರುವ ಗಣಿಗಳೆಲ್ಲ ಈಗ ಮುಚ್ಚಿದೆ ಎಂದರೆ ಅದಕ್ಕೆ ನಾನು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮವೇ ಕಾರಣ. ಆದರೆ, ಕಾಂಗ್ರೆಸ್ ನಾಯಕರು ಅನುಮತಿ ನಿರಾಕರಿಸಿದ ಕಾರಣಕ್ಕೆ ನನ್ನ ಮೇಲೆ ವ್ಯವಸ್ಥಿತ ಸಂಚು ರೂಪಿಸಿ ಮೂಲೆಗುಂಪು ಮಾಡಿದರು. ಗೋವಾದ ಅರ್ಥವ್ಯವಸ್ಥೆ ನನ್ನಿಂದಲೇ ಹಾಳಾಯಿತು ಎಂಬ ಆರೋಪ ಮಾಡಿದರು’ ಎಂದರು.
ಯುಪಿಎ ಸರ್ಕಾರದಲ್ಲಿ ಪರಿಸರ ಸಚಿವೆಯಾಗಿದ್ದ ಜಯಂತಿ ನಟರಾಜನ್ 2013ರಲ್ಲಿ ಗೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 93 ಗಣಿಗಾರಿಕೆ ಯೋಜನೆಗಳಿಗೆ ಪರಿಸರ ಅನುಮತಿ ನಿರಾಕರಿಸಿದ್ದರು.
‘ವಿವಿಧ ಯೋಜನೆಗಳಿಗೆ ಪರಿಸರ ಅನುಮತಿಗೆ ಸಂಬಂಧಿಸಿದಂತೆ ನಾನು ರಾಹುಲ್ ಆಣತಿಯನ್ನು ಪಾಲಿಸಿದ್ದೆ. ಆದರೆ ಕೇಂದ್ರ ನಾಯಕತ್ವವು ನನ್ನ ಹೆಸರಿಗೆ ಕಳಂಕ ತಂದಿದೆ’ ಎಂದು ಜಯಂತಿ ಶುಕ್ರವಾರ ಆರೋಪ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.