ನವದೆಹಲಿ: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಅವರ ಕಂಪೆನಿ ಅಕ್ರಮ ವಹಿವಾಟು ನಡೆಸಿದೆ’ ಎಂಬ ವರದಿ ಪ್ರಕಟಿಸಿರುವ ದಿ ವೈರ್ ಸುದ್ದಿ ಜಾಲತಾಣದ ಸಿಬ್ಬಂದಿ ವಿರುದ್ಧ ₹ 100 ಕೋಟಿ ಮಾನನಷ್ಟ ಪರಿಹಾರ ಮೊಕದ್ದಮೆ ಹೂಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ.
2014ರಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಜಯ್ ಅಮಿತ್ ಷಾ ಅವರ ಕಂಪೆನಿಯ ವಹಿವಾಟಿನಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿದೆ. ಜಯ್ ಅಕ್ರಮವಾಗಿ ಸಾಲಗಳನ್ನು ಪಡೆದಿದ್ದಾರೆ ಎಂದು ಜಾಲತಾಣದಲ್ಲಿ ಪ್ರಕಟವಾದ ವರದಿಯಲ್ಲಿ ಆರೋಪಿಸಲಾಗಿತ್ತು. ವರದಿಯನ್ನು ಆಧರಿಸಿ ಜಯ್ ಷಾ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಈ ಸಂಬಂಧ ಜಯ್ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಭಾನುವಾರ ಬಿಡುಗಡೆ ಮಾಡಿದರು.
‘ಜಯ್ ಅವರ ಕಂಪೆನಿ ಕಾನೂನುಬದ್ಧವಾಗಿಯೇ ವ್ಯವಹಾರ ಮತ್ತು ವಹಿವಾಟು ನಡೆಸಿದೆ. ಅವರು ತಮ್ಮ ಶ್ರಮದಿಂದ ಕಂಪೆನಿಯ ವಹಿವಾಟನ್ನು ಹೆಚ್ಚಿಸಿದ್ದಾರೆ. ಕಂಪೆನಿಯ ಆದಾಯಕ್ಕೆ ತೆರಿಗೆಯನ್ನೂ ಪಾವತಿಸಿದ್ದಾರೆ. ಅವರು ಯಾವುದೇ ಅಕ್ರಮ ವ್ಯವಹಾರ ಮಾಡಿಲ್ಲ’ ಎಂದು ಗೋಯಲ್ ವಿವರಣೆ ನೀಡಿದರು.
‘ಜಯ್ ಅವರ ಒಡೆತನದ ಟೆಂಪಲ್ ಎಂಟರ್ಪ್ರೈಸಸ್ ಲಿಮಿಟೆಡ್ 2013 ಮತ್ತು 2014ರಲ್ಲಿ ಕ್ರಮವಾಗಿ ₹ 6,230 ಮತ್ತು ₹ 1,724ರಷ್ಟು ನಷ್ಟ ಅನುಭವಿಸಿತ್ತು. ಆದರೆ 2014–15ನೇ ಸಾಲಿನಲ್ಲಿ ಕಂಪೆನಿ ₹ 18,728ರಷ್ಟು ಲಾಭ ಗಳಿಸಿತ್ತು. ಆದರೆ 2015–16ನೇ ಸಾಲಿನಲ್ಲಿ ಕಂಪೆನಿ ₹ 80 ಕೋಟಿ ಲಾಭ ಗಳಿಸಿದೆ’ ಎಂದು ದಿ ವೈರ್ ವರದಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.