ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ನಿಷೇಧಕ್ಕೆ ಒಳಗಾಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ವಿನಾಯಿತಿ ನೀಡಿದೆ.
ಇನ್ನು ಮುಂದೆ ನಾನು ಅವಹೇಳನಕಾರಿ ಹಾಗೂ ವ್ಯಕ್ತಿಗತ ವಾಗ್ದಾಳಿಗಳನ್ನು ನಡೆಸುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಮೇಲಿದ್ದ ನಿಷೇಧವನ್ನು ತೆರವು ಗೊಳಿಸಲಾಗಿದೆ ಎಂದು ಚುನಾವನಾ ಆಯೋಗ ತಿಳಿಸಿದೆ.
ಸಮಾಜವಾದಿ ಪಕ್ಷದ ಸಚಿವ ಅಜಂಖಾನ್ ಅವರ ಮೇಲಿನ ನಿಷೇಧ ಮುಂದುವರೆಯಲಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಮಿತ್ ಶಾ ಹಾಗೂ ಅಜಂಖಾನ್ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರದ ವೇಳೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ ಇವರ ಮೇಲೆ ಚುನಾವಣಾ ಪ್ರಚಾರ ನಡೆಸದಿರುವಂತೆ ನಿಷೇಧ ಹೇರಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.