ADVERTISEMENT

ಆರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿ ತಪ್ಪಿತಸ್ಥರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2013, 10:43 IST
Last Updated 25 ನವೆಂಬರ್ 2013, 10:43 IST

ಗಾಜಿಯಾಬಾದ್: ತೀವ್ರ ಕುತೂಹಲ ಮೂಡಿಸಿದ್ದ ಆರುಷಿ-ಹೇಮರಾಜ್ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯವು ತಲ್ವಾರ್ ದಂಪತಿ ರಾಜೇಶ್-ನೂಪುರ್ ಅವರು ತಪ್ಪಿತಸ್ಥರೆಂದು ಹೇಳಿದೆ.

2008ರಲ್ಲಿ ನಡೆದ ಈ ಕೊಲೆ ಪ್ರಕರಣದ ವಿಚಾರಣೆಯು ಕಳೆದ 15 ತಿಂಗಳಿನಿಂದ ನಡೆದಿತ್ತು. ಇದೀಗ ಸಿಬಿಐ ವಿಶೇಷ ನ್ಯಾಯಾಲಯವು ಕೊಲೆಯಾದ ಆರುಷಿಯ ಪೋಷಕರಾದ ತಲ್ವಾರ್ ದಂಪತಿಯೇ ಕೊಲೆ ಮಾಡಿದ ಅಪರಾಧಿಗಳು ಎಂದು ತೀರ್ಪು ನೀಡಿದೆ.

ತೀರ್ಪು ಹೊರಬೀಳುತ್ತಿದ್ದಂತೆ ತಲ್ವಾರ್ ದಂಪತಿಯನ್ನು ಬಂಧಿಸಿ ಗಾಜಿಯಾಬಾದ್ ಜೈಲಿಗೆ ಕರೆದೊಯ್ಯಲಾಯಿತು. ಶಿಕ್ಷೆಯ ಪ್ರಮಾಣವು ನಾಳೆ (ಮಂಗಳವಾರ) ಪ್ರಕಟವಾಗಲಿದೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಲ್ವಾರ್ ಪರ ವಕೀಲರು  ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.

ಏನಿದು ಪ್ರಕರಣ: 2008 ಮೇ 15 ರ ರಾತ್ರಿ ನೋಯಿಡಾದ ಜಲ್‌ವಾಯು ವಿಹಾರ ನಿವಾಸದಲ್ಲಿ ಆರುಷಿ ಹಾಗೂ ಮನೆ ಕೆಲಸದ ಸಹಾಯಕ ಹೇಮರಾಜ್‌ ಅವರ ಕೊಲೆ ನಿಗೂಢ ವಾಗಿ ನಡೆದಿತ್ತು.  ಆನಂತರ ಕೊಲೆ ತನಿಖೆ ಆರಂಭಿಸಿದ್ದ ಉತ್ತರ ಪ್ರದೇಶ ಪೊಲೀಸರು ಹಾಗೂ ಸಿಬಿಐ ಆರುಷಿ ಪೋಷಕರ ಮೇಲೆ ಕೊಲೆ ಆರೋಪ ಹೊರಿಸಿದ್ದರು.

ADVERTISEMENT

ಮಾಧ್ಯಮಗಳಿಂದ ಭಾರಿ ಪ್ರಚಾರ ಪಡೆದ ಈ ಪ್ರಕರಣದ ವರದಿ ಪ್ರಸಾರದ ಮೇಲೆ 2009 ರ ಸುಪ್ರೀಂಕೋರ್ಟ್‌ ತಡೆ ಒಡ್ಡಿತ್ತು. ಮೊದಲಿಗೆ ಹೇಮರಾಜ್‌ ಆರುಷಿಯನ್ನು ಕೊಲೆ ಮಾಡಿ ದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಶಂಕಿಸಿದ್ದರು. ಆದರೆ ಆತನ ಶವ  ತಾರಸಿಯಲ್ಲಿ ಮಾರನೇ ದಿನ ಪತ್ತೆಯಾಗಿದ್ದರಿಂದ ಆತ ಈ ಕೊಲೆ ಮಾಡಿರಲಿಕ್ಕಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಪ್ರಕರಣದ ಗಂಭೀರತೆ ಅರಿತ ಅಂದಿನ ಮುಖ್ಯಮಂತ್ರಿ ಮಾಯಾವತಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.