ADVERTISEMENT

ಇಂದಿರಾ ಪುಣ್ಯತಿಥಿ: ಮೋದಿ ಗೈರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ಅಂಗ­ವಾಗಿ ಶಕ್ತಿ ಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ­ದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಿದ್ದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆ­ಸ್‌ನ ಪ್ರಮುಖ ಮುಖಂಡರು ಇಂದಿರಾ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಶಕ್ತಿ ಸ್ಥಳದಲ್ಲಿ ಭಕ್ತಿಗೀತೆ ಹಾಗೂ ಇಂದಿರಾ ಭಾಷಣದ ಧ್ವನಿ ಮುದ್ರಿತ ತುಣುಕುಗಳನ್ನು ಹಾಕಲಾಗಿತ್ತು.

ಸರ್ಕಾರವು ಇಂದಿರಾ ಪುಣ್ಯತಿಥಿ ಕಾರ್ಯಕ್ರಮದಿಂದ ದೂರ ಇದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಹಿರಿಯ ಮುಖಂಡ ಮನೀಷ್‌ ತಿವಾರಿ,  ‘ಇಂದಿರಾ ಗಾಂಧಿ ಅವರು ಈ ದೇಶ­ಕ್ಕಾಗಿ ಬದುಕಿದ್ದರು ಮತ್ತು ಈ ದೇಶ­ಕ್ಕಾಗಿ ಪ್ರಾಣ­ತೆತ್ತರು. ಅವರ ಬಲಿ­ದಾನ­ವನ್ನು ಗೌರವಿಸುವುದು  ಪ್ರತಿ­ಯೊಂದು ಸರ್ಕಾರದ ಹೊಣೆಗಾರಿಕೆ’ ಎಂದರು.

ಶಕ್ತಿ ಸ್ಥಳದಲ್ಲಿ ಕಾಂಗ್ರೆಸ್‌ ಏರ್ಪ­ಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ­ರಾದ ಮೋತಿಲಾಲ್‌ ವೋರಾ, ಎಂ.ವೀರಪ್ಪ ಮೊಯಿಲಿ, ಸುಶೀಲ್‌ ಕುಮಾರ್‌್ ಶಿಂಧೆ, ಅಹ್ಮದ್‌ ಪಟೇಲ್‌, ಭೂಪಿಂ­ದರ್‌್ ಸಿಂಗ್‌ ಹೂಡಾ, ಗುಲಾಂ ನಬಿ ಆಜಾದ್‌, ದಿಗ್ವಿಜಯ್‌ ಸಿಂಗ್‌, ಶಕೀಲ್‌ ಅಹ್ಮದ್‌ ಉಪಸ್ಥಿತ­ರಿದ್ದರು.
ಈ ಹಿಂದೆ ಅಟಲ್‌ ಬಿಹಾರಿ ವಾಜ­ಪೇಯಿ ಅವರು ಪ್ರಧಾನಿ­ಯಾಗಿದ್ದಾಗ ಇಂದಿರಾ ಪುಣ್ಯತಿಥಿಯ ದಿನ ಅವರ ಸ್ಮಾರ­ಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದರು.
ಟ್ವೀಟ್‌: ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ­ಯಂದು ಅವ­ರಿಗೆ ಗೌರವ ಸಲ್ಲಿಸುತ್ತಿರುವ ನಾಗ­ರಿಕ­­ರಲ್ಲಿ ನಾನೂ ಒಬ್ಬನಾಗಿದ್ದೇನೆ’ ಎಂದು ಈ ಮೊದಲು ಮೋದಿ ಟ್ವೀಟ್‌ ಮಾಡಿದ್ದರು. ಸರ್ದಾರ್‌್ ವಲ್ಲಭ ಭಾಯ್‌್ ಪಟೇಲ್‌್ ಅವರ ಜನ್ಮದಿನದ
ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ­ದಲ್ಲಿ ಮೋದಿ ಅವರು ಇಂದಿರಾ ಪುಣ್ಯತಿಥಿ­ಯನ್ನು ಉಲ್ಲೇಖಿಸಿ ಮಾತನಾಡಿದರು.

ಸ್ಪೇನ್‌ ಪ್ರವಾಸದಲ್ಲಿರುವ ಸಚಿವ ಹರ್ಷವರ್ಧನ್‌ ಅವರು ಇಂದಿರಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ‘೩೦ ವರ್ಷಗಳ ಹಿಂದೆ ಪ್ರಾಣತ್ಯಾಗ ಮಾಡಿದ ಇಂದಿರಾ ಗಾಂಧಿ ಅವರು ಯಾವಾಗಲೂ ನೆನಪಿನಲ್ಲಿರುತ್ತಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.