ಚಂಡೀಗಡ (ಪಿಟಿಐ): ವಿವಾದಿತ ‘ದೇವಮಾನವ’ ರಾಮ್ಪಾಲ್ಗೆ ೨೦೦೬ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಗುರುವಾರ ರದ್ದು ಮಾಡಿದ್ದು, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈ ನಡುವೆ ಪೊಲೀಸರು, ಆಶ್ರಮದಲ್ಲಿ ನಡೆದ ಸಂಘರ್ಷದ ವೇಳೆ ಆರು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಮ್ಪಾಲ್ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬುಧವಾರ ರಾತ್ರಿ ಬಂಧಿತರಾದ ರಾಮ್ಪಾಲ್ ಅವರನ್ನು ಹೈಕೋರ್ಟ್ನ ದ್ವಿಸದಸ್ಯ ಪೀಠದ ಮುಂದೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆ ನವೆಂಬರ್್ ೨೮ರಂದು ನಡೆಯಲಿದ್ದು, ಅಲ್ಲಿಯವರೆಗೆ ರಾಮ್ಪಾಲ್ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಕೋರ್ಟ್ಗೆ ಹಾಜರುಪಡಿಸುವುದಕ್ಕೆ ಮುನ್ನ ರಾಮ್ಪಾಲ್ ಅವರನ್ನು ಪಂಚಕುಲಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಸೂಚನೆ: ರಾಮ್ಪಾಲ್ ಬಂಧನಕ್ಕೆ ಕೈಗೊಂಡ ಕಾರ್ಯಾಚರಣೆಯ ವಿವರ, ಪೊಲೀಸರು ಹಾಗೂ ಬೆಂಬಲಿಗರ ನಡುವಣ ಸಂಘರ್ಷದಲ್ಲಿ ಆಗಿರುವ ಆಸ್ತಿ ನಷ್ಟ, ಜನರಿಗೆ ಆದ ಗಾಯ, ಆಶ್ರಮದಲ್ಲಿ ಪತ್ತೆಯಾದ ಶಸ್ತ್ರಾಸ್ತ್ರಗಳು... ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಂ.ಜೈಪಾಲ್, ದರ್ಶನ್ ಸಿಂಗ್ ಅವರಿದ್ದ ಪೀಠವು ಹರಿಯಾಣ ಪೊಲೀಸ್್ ವರಿಷ್ಠಾಧಿಕಾರಿಗೆ ಸೂಚನೆ ನೀಡಿತು. ಹೊಸ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿ ರಾಮ್ಪಾಲ್ ಅವರನ್ನು ನಂತರದಲ್ಲಿ ಹಿಸ್ಸಾರ್ಗೆ ಕರೆದೊಯ್ಯಲಾಯಿತು.
ತನಿಖೆ ಶುರು: ಈಗ ನಿಜವಾದ ತನಿಖೆ ಶುರುವಾಗಿದೆ. ಆಶ್ರಮದಲ್ಲಿದ್ದ ಮುಗ್ಧ ಜನರನ್ನು ರಕ್ಷಿಸುವುದು ಹಾಗೂ ರಾಮ್ಪಾಲ್್ ಅವರನ್ನು ಬಂಧಿಸುವುದು ಮೊದಲು ನಮ್ಮ ಆದ್ಯತೆಯಾಗಿತ್ತು. ರಾಮ್ಪಾಲ್್ ಅವರಿಗೆ ನಕ್ಸಲೀಯರ ಸಂಪರ್ಕ ಇದೆಯೇ ಎನ್ನುವುದನ್ನು ಕೂಡ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಹರಿಯಾಣ ಡಿಜಿಪಿ ವಸಿಷ್ಠ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.