ಸತ್ನಾ/ಮಧ್ಯಪ್ರದೇಶ: ಮುಂಬರುವ ಆಕ್ಟೋಬರ್ 1 ರಿಂದ ಸತ್ನಾ ಜಿಲ್ಲೆಯ ಶಾಲಾ ಮಕ್ಕಳು ‘ಎಸ್. ಸರ್’ ಹೇಳುವ ಬದಲು ಜೈ ಹಿಂದ್ ಹೇಳಲಿದ್ದಾರೆ!
ಮಧ್ಯಪ್ರದೇಶದ ಶಿಕ್ಷಣ ಸಚಿವ ಕುನ್ವಾರ್ ವಿಜಯ್ ಶಾ ಅವರು ಮಂಗಳವಾರ ಈ ಪ್ರಕಟಣೆ ಹೊರಡಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರು ಶಾಲಾ ಪಠ್ಯ ಕ್ರಮದಲ್ಲಿ ಯೋಗವನ್ನು ಕಡ್ಡಾಯಗೊಳಿಸಿದ್ದರು.
ಹರಿಯಾಣ, ಛತ್ತೀಸ್ಗಡ ಮತ್ತು ರಾಜಸ್ತಾನದ ಶಾಲೆಗಳಲ್ಲಿ ಯೋಗವನ್ನು ಹೇಳಿಕೊಡಲಾಗುತ್ತಿದೆ. ಹಾಗೇ ರಾಜಸ್ತಾನದ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯ ಮಾಡಲಾಗಿದೆ.
2015ರಲ್ಲಿ ಕುನ್ವಾರ್ ವಿಜಯ್ ಶಾ ಅವರು ಸೆಲ್ಫಿ ತೆಗೆಸಿಕೊಳ್ಳುವ ವಿಚಾರದಲ್ಲೂ ಸುದ್ದಿಯಾಗಿದ್ದರು. ಖಂಡ್ವಾ ಜಿಲ್ಲೆಯ ಹರ್ಷುದ್ ವಿಧಾನಸಭಾ ಕ್ಷೇತ್ರದ ಜನರು ‘ನನ್ನೊಟ್ಟಿಗೆ ಸೆಲ್ಫಿ’ ತೆಗೆಸಿಕೊಳ್ಳಬೇಕಾದರೆ 10 ರೂಪಾಯಿ ಕೊಡಬೇಕು ಎಂದಿದ್ದರು.
ಈ ಸೆಲ್ಫಿ ಹಣವನ್ನು ಉದ್ದೇಶಿತ ಬುಡಕಟ್ಟು ಜನರ ವೃದ್ಧಾಶ್ರಮ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಕುನ್ವಾರ್ ವಿಜಯ್ ಶಾ ಹೇಳಿದ್ದರು.
ಆದಾಗ್ಯೂ, ಹಣ ನೀಡಲು ಸಾಧ್ಯವಾಗದಿದ್ದವರು ಕೂಡ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳ ಬೇಕು ಎಂದು ವಿಜಯ್ ಶಾ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.