ನವದೆಹಲಿ (ಪಿಟಿಐ): ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆಪಾದನೆಗೆ ಗುರಿಯಾಗಿರುವ ಇಸ್ರೇಲ್ನ ಮೂವರು ರಾಜತಾಂತ್ರಿಕ ಅಧಿಕಾರಿಗಳನ್ನು ಸ್ವದೇಶಕ್ಕೆ ವಾಪಸು ಕಳುಹಿಸಲಾಗಿದೆ ಎಂದು ಇಸ್ರೇಲ್ನ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.
ಈ ಮೂವರು ರಾಜತಾಂತ್ರಿಕ ಅಧಿಕಾರಿಗಳಲ್ಲಿ ಒಬ್ಬರು ವಲಸೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದು, ಇನ್ನಿಬ್ಬರು ಒರಟಾಗಿ ವರ್ತಿಸಿದರು ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಸ್ರೇಲ್ ದೂತಾವಾಸ, ಈ ಮೂವರನ್ನು ಸ್ವದೇಶಕ್ಕೆ ವಾಪಸು ಕಳುಹಿಸುವ ನಿರ್ಧಾರವನ್ನು ಸ್ವಯಂ ಪ್ರೇರಿತವಾಗಿ ಕೈಗೊಂಡಿದೆ.
ಈ ಮಧ್ಯೆ, ಪ್ರಕರಣ ಕುರಿತಂತೆ ವಿವರವಾದ ವರದಿಯನ್ನು ಸಿದ್ಧ ಪಡಿಸಿ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮೂವರಿಗೆ ರಾಜತಾಂತ್ರಿಕ ಅಧಿಕಾರಿಗಳಿಗೆ ಇದ್ದ ರಕ್ಷಣೆ ಇದ್ದ ಕಾರಣ ಅವರನ್ನು ಬಂಧಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.