ADVERTISEMENT

ಉತ್ತರ ಪ್ರದೇಶ ಲೋಕಾಯುಕ್ತರ ನೇಮಕ

ಪಟ್ಟಿಗೆ ವೀರೇಂದ್ರ ಸಿಂಗ್ ಹೆಸರು ಸೇರಿಸಿದ್ದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2015, 20:16 IST
Last Updated 18 ಡಿಸೆಂಬರ್ 2015, 20:16 IST

ಲಖನೌ (ಪಿಟಿಐ): ಲೋಕಾಯುಕ್ತ ನೇಮಕ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪಟ್ಟಿಯಲ್ಲಿ ನಿವೃತ್ತ ನ್ಯಾಯ ಮೂರ್ತಿ ವೀರೇಂದ್ರ ಸಿಂಗ್ ಅವರ ಹೆಸರು ಸೇರಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರದ ಮೇಲೆ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕಿಡಿ ಕಾರಿದ್ದಾರೆ.

‘ನ್ಯಾಯಮೂರ್ತಿ ಎ.ಎನ್. ಮಿತ್ತಲ್ ಅವರನ್ನು ಲೋಕಾಯುಕ್ತರಾಗಿ ನೇಮಿ ಸಲು ನಾವು ಬಹುತೇಕ ಒಮ್ಮತಕ್ಕೆ ಬಂದಿದ್ದೆವು. ಆದರೆ ಸರ್ಕಾರ ಅದನ್ನು ಸುಪ್ರೀಂಕೋರ್ಟ್‌ಗೆ ತಿಳಿಸುವುದರಲ್ಲಿ ವಿಫಲವಾಗಿದೆ’ ಎಂದು ಚಂದ್ರಚೂಡ್ ಆರೋಪಿಸಿದ್ದಾರೆ.

ಲೋಕಾಯುಕ್ತ ನೇಮಕ ತ್ರಿಸದಸ್ಯ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸಹ ಇದ್ದರು. ಸಾಂವಿಧಾನಿಕ ಅಧಿಕಾರ ಬಳಸಿ ಸುಪ್ರೀಂಕೋರ್ಟ್, ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಪಟ್ಟಿಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ವೀರೇಂದ್ರ ಸಿಂಗ್ ಅವರನ್ನು ಲೋಕಾಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಕಾಲಮಿತಿ ಯೊಳಗೆ ರಾಜ್ಯ ಸರ್ಕಾರ ಲೋಕಾ ಯುಕ್ತರನ್ನು ನೇಮಿಸದ ಕಾರಣ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತ್ತು.

ಈ ಸಂಬಂಧ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರಿಗೆ  ಸುಪ್ರೀಂಕೋರ್ಟ್ ಪತ್ರ ರವಾನಿಸಿದೆ. ಪತ್ರದ ಪ್ರತಿಗಳನ್ನು ತ್ರಿಸದಸ್ಯ ಸಮಿತಿಯಲ್ಲಿದ್ದ ಮುಖ್ಯಮಂತ್ರಿ ಅಖಿ ಲೇಶ್ ಯಾದವ್, ವಿರೋಧ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೂ ತಲುಪಿಸಲಾಗಿದೆ.

‘ವೀರೇಂದ್ರ ಸಿಂಗ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭರವಸೆ ನೀಡಿದ್ದರು. ಆದರೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪಟ್ಟಿಯಲ್ಲಿ ಅವರ ಹೆಸರಿದೆ’ ಎಂದು ನ್ಯಾಯ ಮೂರ್ತಿ ಚಂದ್ರಚೂಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
*
ನಾಳೆ ಅಧಿಕಾರ ಸ್ವೀಕಾರ
ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ  ವೀರೇಂದ್ರ ಸಿಂಗ್ ಅವರನ್ನು ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರು ಶುಕ್ರವಾರ ರಾಜ್ಯದ ಲೋಕಾಯುಕ್ತರಾಗಿ ನೇಮಕ ಮಾಡಿದ್ದಾರೆ.

‘ಡಿಸೆಂಬರ್ 20ರಂದು ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಲೋಕಾಯುಕ್ತರು ಅಧಿಕಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ’ ಎಂದು ರಾಜಭವನದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT