ಮುಂಬೈ: ಯುಪಿಎ–2 ಸರ್ಕಾರ ತನ್ನ ಅವಧಿ ಕೊನೆಗೊಳ್ಳುವ ಹೊತ್ತಿಗೆ ಎದುರಿಸಿದಷ್ಟೇ ಭ್ರಷ್ಟಾಚಾರ ಆರೋಪಗಳನ್ನು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವೂ ಎದುರಿಸಬೇಕಾದೀತು ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಎಚ್ಚರಿಕೆ ನೀಡಿದ್ದಾರೆ.
ಯುಪಿಎ–2 ಸರ್ಕಾರದ ಅವಧಿ ಕೊನೆಯಾಗುವ ಹೊತ್ತಿಗೆ ಆ ಸರ್ಕಾರಕ್ಕೆ ‘ಹಲವು ಭ್ರಷ್ಟ ಕೆಲಸ’ಗಳನ್ನು ಮಾಡಿದ ಆರೋಪ ಅಂಟಿಕೊಂಡಿತು. ಇದೇ ಸ್ಥಿತಿ ಎನ್ಡಿಎ ಸರ್ಕಾರಕ್ಕೂ ಬರುವ ಸಾಧ್ಯತೆ ಇದೆ. ಆದರೆ ಹಾಗೆ ಆಗದಿರಲಿ ಎಂದು ತಾವು ಬಯಸುವುದಾಗಿ ಚಿದಂಬರಂ ಹೇಳಿದ್ದಾರೆ.
‘ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆ ಆಗುವ ವರೆಗೆ ಯಾರನ್ನೂ ತಪ್ಪಿತಸ್ಥರು ಎಂದು ಹೇಳಲಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.‘ಪ್ರಾಮಾಣಿಕರು ಎಂದು ಸಾಬೀತಾಗುವವರೆಗೆ ಎಲ್ಲರೂ ತಪ್ಪಿತಸ್ಥರು ಎಂಬ ಮನೋಭಾವ ಈಗ ಇದೆ. ಆದರೆ ಅದು ಸರಿಯಲ್ಲ. ಇಂತಹ ಮನೋಭಾವ ದೇಶದ ಕಾನೂನುವ್ಯವಸ್ಥೆ ನಾಶಪಡಿಸುತ್ತದೆ’ ಎಂದು ಹೇಳಿದ್ದಾರೆ.
ಕೋಟಾ ನೋಟು ನಿಯಂತ್ರಿಸುವಲ್ಲಿ ನೋಟು ರದ್ದತಿ ದಯನೀಯವಾಗಿ ವಿಫಲವಾಗಿದೆ ಎಂದೂ ಹೇಳಿದ್ದಾರೆ. ‘ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆಯುವಲ್ಲಿ ನೋಟು ರದ್ದತಿ ಯಾವ ರೀತಿಯಲ್ಲಿ ವಿಫಲವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಮುಂದಿನ 20 ದಿನಗಳಲ್ಲಿ ಗುಜರಾತಿಗೆ ಹೋಗಿ ನೋಡಬೇಕು. ಅಲ್ಲಿ ಯಾವ ರೀತಿಯ ಹಣ ಹರಿದಾಡುತ್ತಿದೆ ಎಂಬುದು ಆಗ ಅರಿವಿಗೆ ಬರುತ್ತದೆ’ ಎಂದಿದ್ದಾರೆ. ಉಗ್ರರು ದೇಶದೊಳಕ್ಕೆ ನುಸುಳುವುದು ನೋಟು ರದ್ದತಿಯಿಂದ ಕಡಿಮೆಯಾಗಿದೆ ಎಂಬ ಸರ್ಕಾರದ ವಾದವನ್ನು ಚಿದಂಬರಂ ಅಲ್ಲಗಳೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.