ಚೆನ್ನೈ(ಪಿಟಿಐ): ‘ಐಆರ್ಎನ್ಎಸ್ಎಸ್ 1ಸಿ’ ಉಪಗ್ರಹ ಅ. 10ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಚಿಮ್ಮಲಿದೆ. ಈ ಉಪಗ್ರಹ ಉಡಾವಣೆಗೆ ಬೇಕಾದ ಸಿದ್ಧತೆಗಳು ಮಂಗಳವಾರದಿಂದಲೇ ಪ್ರಾರಂಭವಾಗಲಿದೆ. ‘ಪಿಎಸ್ಎಲ್ವಿ 26’ ಬಾಹ್ಯಾಕಾಶ ನೌಕೆಯು 1,425.4 ಕೆ.ಜಿ ತೂಕದ ಐಆರ್ಎನ್ಎಸ್ಎಸ್ 1ಸಿ ಉಪಗ್ರಹವನ್ನು ಹೊತ್ತೊಯ್ಯಲಿದೆ.
ಭಾರತ ಅಮೆರಿಕದಂತೆ ತನ್ನದೇ ಆದ ‘ಜಿಪಿಎಸ್’ ತಂತ್ರಜ್ಞಾನ ಹೊಂದಲು ಈ ಉಪಗ್ರಹ ಹಾರಿಬಿಡಲಾಗುತ್ತಿದೆ. ಇಂತಹ ಒಟ್ಟು 7 ಉಪಗ್ರಹಗಳನ್ನು ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಈ ಸರಣಿಯಲ್ಲಿ ಇದು ಮೂರನೆಯ ಉಪಗ್ರಹ.
ಈಗಾಗಲೇ ಐಆರ್ಎನ್ಎಸ್ಎಸ್ 1ಎ ಮತ್ತು ಐಆರ್ಎನ್ಎಸ್ಎಸ್ 1ಬಿ ಉಪಗ್ರಹಗಳನ್ನು ಪಿಎಸ್ಎಲ್ವಿ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಈ ಉಪಗ್ರಹವು ಸಾಗರ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದೆ. ಜತೆಗೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆ, ವಾಹನಗಳ ಮೇಲೆ ನಿಗಾ ವಹಿಸುವಿಕೆ ಮುಂತಾದ ಕಾರ್ಯಗಳಿಗೆ ಸಹಕಾರಿಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.