ಬೆಂಗಳೂರು: ತೆರಿಗೆ ವಂಚಿಸಲು ಗುತ್ತಿಗೆದಾರರೊಂದಿಗೆ ಶಾಮೀಲಾದ ಆರೋಪದಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಬೆಳಗಾವಿ ವಿಭಾಗದ ಇನ್ಸ್ಪೆಕ್ಟರ್ ಅಭಿಷೇಕ ತ್ರಿಪಾಠಿ ಹಾಗೂ ಇತರ ನಾಲ್ವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಐ.ಟಿ ಇಲಾಖೆಯ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ವಿಭಾಗದ ಕಮಿಷನರ್ ಭುವನಾ ಸಿ. ಯಶೌರಿ ಸೆ.27ರಂದು ನೀಡಿದ ದೂರು ಆಧರಿಸಿ ಈ ಎಫ್ಐಆರ್ ದಾಖಲಾಗಿದೆ.
‘ಅಭಿಷೇಕ್ ತ್ರಿಪಾಠಿ, ಇಬ್ಬರು ತೆರಿಗೆ ನಿರ್ವಾಹಕರು ಹಾಗೂ ಇಬ್ಬರು ತೆರಿಗೆ ಸಂಗ್ರಹಕಾರರು ಐ.ಟಿ ಕಾಯ್ದೆ ಉಲ್ಲಂಘಿಸಿ ಭಾರಿ ಪ್ರಮಾಣದಲ್ಲಿ ತೆರಿಗೆ ವಂಚಿಸಲು ಗುತ್ತಿಗೆದಾರರಿಗೆ ನೆರವಾಗಿದ್ದಾರೆ. ಇದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಶೇ 1ರಷ್ಟು ತೆರಿಗೆ ಸಂಗ್ರಹಿಸುವ ಬದಲು ಶೇ 0.1ರಷ್ಟು ತೆರಿಗೆ ಸ್ವೀಕರಿಸಿದ್ದಾರೆ. ಈ ಅಕ್ರಮದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಹಲವರು ಸೇರಿ ಸಂಚು ರೂಪಿಸಿರುವ ಅನುಮಾನ ಇದೆ’ ಎಂದು ಭುವನಾ ದೂರಿನಲ್ಲಿ ಆರೋಪಿಸಿದ್ದಾರೆ.
ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ತನಿಖಾಧಿಕಾರಿಯನ್ನು ನೇಮಕ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.