ಬೀದಿ ಬದಿ ಐಸ್ ಕ್ರೀಂ ಮಾರುವ ಬಾಬು ಸಿಂಗ್, ಪಾನೀಪೂರಿ ಮಾರುವ ಬುಧಿಯಾ ರಾಮ್ ಅವರನ್ನು ಯುನೆಸ್ಕೊ ‘ಅತ್ಯುತ್ತಮ ಮಾರಾಟಗಾರ’ಎಂದು ಘೋಷಿಸಿದೆ!
ಅರೆ, ಯುನೆಸ್ಕೊ ಇಂಥ ಕಾರ್ಯಕ್ಕೂ ಮುಂದಾಗಿದೆಯೇ ಎಂದು ಹುಬ್ಬೇರಿಸಬೇಡಿ. ಇಂಥ ಘೋಷಣೆಗಳನ್ನು ಒಳಗೊಂಡ ಬೀದಿ ಬದಿ ತಿನಿಸು ಮಾರುವ ಮಾರಾಟಗಾರರ ಚಿತ್ರಗಳು ಈಗ ಫೇಸ್ಬುಕ್ನಲ್ಲಿ ಹರಿದಾಡುತ್ತಿವೆ.
ಚಿತ್ರಗಳ ಮೇಲ್ಭಾಗದಲ್ಲಿ ಯುನೆಸ್ಕೊ ಲಾಂಛನವೂ ಇದೆ. ಅದರ ಎರಡೂ ಬದಿಯಲ್ಲಿ ಲಾಂಛನದತ್ತ ಬೆರಳು ತೋರಿ ನಗುತ್ತಿರುವ ಅಣಕದ ಸ್ಮೈಲಿ ಚಿತ್ರಗಳಿವೆ. ಎಲ್ಲಾ ಚಿತ್ರಗಳಲ್ಲೂ ಯುನೆಸ್ಕೊ ಆಯಾ ಮಾರಾಟಗಾರರನ್ನು ‘ಜಗತ್ತಿನ ಅತ್ಯುತ್ತಮ ಮಾರಾಟಗಾರರೆಂದು ಘೋಷಿಸಿದೆ’ ಎಂಬ ಇಂಗ್ಲಿಷ್ ಬರಹಗಳಿವೆ.
‘ನಮೋ’ ಹಿನ್ನೆಲೆ!
ಅಂದಹಾಗೆ ಈ ಯುನೆಸ್ಕೊ ಘೋಷಣೆಯ ಹಿಂದೊಂದು ‘ನಮೋ’ ಕಥೆ ಇದೆ! ‘I Support NaMo’ ಹೆಸರಿನ ಟ್ವಿಟರ್ ಖಾತೆಯಿಂದ, ‘ಭಾರತಕ್ಕೆ ಅಭಿನಂದನೆಗಳು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಯುನೆಸ್ಕೊ ‘ಜಗತ್ತಿನ ಅತ್ಯುತ್ತಮ ಪ್ರಧಾನಿ’ ಎಂದು ಘೋಷಿಸಿದೆ’ ಎಂದು ಜೂನ್ 24ರಂದು ಟ್ವೀಟಿಸಲಾಗಿದೆ.
ಈ ಟ್ವೀಟ್ ಅನ್ನು ಕ್ರೀಡಾಪಟು ಪಂಕಜ್ ಅಡ್ವಾಣಿ ಸೇರಿದಂತೆ ಹಲವರು ರಿ-ಟ್ವೀಟ್ ಮಾಡಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ‘ಸುಳ್ಳಿನ ಪ್ರಯೋಗ’ವನ್ನು ಹಲವರು ಇಂಥ ನಗೆಚಟಾಕಿ ಚಿತ್ರಗಳ ಮೂಲಕವೇ ಅಣಕಿಸಿದ್ದಾರೆ.
‘ಮೋದಿ ಮಾನಾನ ಇಂಟರ್ ನ್ಯಾಷನಲ್ ಲೆವೆಲ್ಲಲ್ಲಿ ಮೂರುಕಾಸಿಗೆ ಹರಾಜಾಕಿ ಕಾಮಿಡಿ ಪೀಸ್ ಮಾಡೋತನಕ ತನಕ ಭಕ್ತರಿಗೆ ನೆಮ್ಮದಿ ಇಲ್ಲ ಅಂತ ಕಾಣ್ತದೆ. ಯಪ್ಪಾ ಸೆಗಣಿತಲೆ ಭಕ್ತರಾ.. ಅದು ಯುನೆಸ್ಕೊ ಕಣ್ರಪ್ಪ, ಕಲಾಸಿಪಾಳ್ಯದ ಗುಜರಿಅಂಗಡಿ ಅಲ್ಲ. ಯುನೆಸ್ಕೊ ಮಂದಿ " ಸರ್ಕಲ್ ಮಾರಮ್ಮನ ಜಾತ್ರೆ ಪ್ರಯುಕ್ತ ಶ್ರೇಷ್ಠ ಸಮಾಜಸೇವಕ " ಅನ್ನೋ ಥರದ ಯಾವ ಪ್ರಶಸ್ತಿನೂ ಕೊಡೋದಿಲ್ಲ ಕಣ್ರಯ್ಯ.. ನಿಮ್ಮ ಗೊಬ್ಬರದ ತಲೆಗಿಷ್ಟು ಬೆಂಕಿ ಹಾಕ, ಮೋದಿ ಮುಗಿಸೋಕೆ ಇನ್ಯಾರೂ ಬೇಡ. ನಿಮ್ಮಂಥ ಬಿಕನಾಸಿ ಭಕ್ತರೇ ಸಾಕು. ತೆಪ್ಪಗೆ ಬಿದ್ಕಳ್ರಪ್ಪ ನಮಗೆ ನಕ್ಕೂ ನಕ್ಕೂ ಸಾಕಾಗಿದೆ’ ಎಂದು ಲೇಖಕ ಟಿ.ಕೆ.ದಯಾನಂದ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.