ADVERTISEMENT

ಕಂಪೌಂಡ್ ಕುಸಿತ: 11 ಜನ ಸಾವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 12:04 IST
Last Updated 6 ಜುಲೈ 2014, 12:04 IST

ಚೆನ್ನೈ (ಪಿಟಿಐ/ ಐಎಎನ್ಎಸ್): 20 ಅಡಿ ಎತ್ತರದ ಕಂಪೌಂಡ್‌ ಕುಸಿದು ಒಂದು ಮಗು, ನಾಲ್ವರು ಮಹಿಳೆಯರು ಸೇರಿದಂತೆ 11 ಜನರು ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುವಳ್ಳುವರ್‌ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.  ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಕಂಪೌಂಡ್‌, ಪಕ್ಕದಲ್ಲೇ ಇದ್ದ ಕೂಲಿಕಾರ್ಮಿಕರ ಗುಡಿಸಲುಗಳ ಮೇಲೆ  ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ.

‘ಒಂದು ಮಗು, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 11 ಜನ ಸ್ಥಳದಲ್ಲೇ ಅಸುನೀಗಿದ್ದಾರೆ’ ಎಂದು ತಿರುವಳ್ಳುವರ್ ಜಿಲ್ಲಾಧಿಕಾರಿ ಕೆ. ವೀರ ರಾಘವರಾವ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಮೃತರಲ್ಲಿ ಒಂಬತ್ತು ಜನರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದು, ಉಳಿದ ಇಬ್ಬರು ತಮಿಳುನಾಡಿವರು ಎಂದು ತಿಳಿದು ಬಂದಿದೆ.

ಕಂಪೌಂಡ್‌ ಕಟ್ಟಿಸುತ್ತಿದ್ದ ಕಂಪೆನಿಯ ಮಾಲೀಕರಾದ ರಾಮಾನಾಥನ್‌ ಹಾಗೂ ಅವರ ಸಹೋದರ ಬಾಲು ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸರವನನ್‌ ತಿಳಿಸಿದ್ದಾರೆ.

ಕಂಪೌಂಡ್‌ ಅವಶೇಷಗಳಡಿ ಸಿಲುಕಿದ್ದ 19 ವರ್ಷದ ನಾಗರಾಜ್‌ ಎಂಬ ಯುವಕರೊಬ್ಬರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಕಳೆದ ರಾತ್ರಿಯಷ್ಟೇ ವ್ಯಾಪಕ ಮಳೆ ಸುರಿದಿತ್ತು.

ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕಳೆದೊಂದು ವಾರದಲ್ಲಿ ನಡೆದ ಎರಡನೇ ದುರಂತ ಇದಾಗಿದೆ. ಎಂಟು ದಿನಗಳ ಹಿಂದೆ 11 ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 61 ಜನರು ಸಾವನ್ನಪ್ಪಿದ್ದರು.

ಹೈದರಾಬಾದ್ ವರದಿ (ಐಎಎನ್‌ಎಸ್‌): ತಮಿಳುನಾಡಿನಲ್ಲಿ ಕಂಪೌಂಡ್ ಕುಸಿತದಲ್ಲಿ ಸಾವಿನ್ನಪ್ಪಿದ ಆಂಧ್ರ ಪ್ರದೇಶದ ಕಾರ್ಮಿಕರ ಕುಟುಂಬಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.