ADVERTISEMENT

ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಶಾಲೆಗಳು, ನಿಲ್ದಾಣಗಳು, ಹೆದ್ದಾರಿಗಳು ಉಗ್ರರ ಗುರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:39 IST
Last Updated 17 ಡಿಸೆಂಬರ್ 2014, 19:39 IST

ನವದೆಹಲಿ (ಪಿಟಿಐ): ಪಾಕಿಸ್ತಾನದ ಪೆಶಾವರದ ಸೇನಾ ಶಾಲೆಯಲ್ಲಿ ನಡೆದ ಮಕ್ಕಳ ಹತ್ಯಾಕಾಂಡದ ಬೆನ್ನ­­ಲ್ಲಿಯೇ  ದೇಶದೊಳಗಿನ ಎಲ್ಲ ಶೈಕ್ಷಣಿಕ ಸಂಸ್ಥೆ­ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರವು ಬುಧವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ಜನವರಿ ೨೬ರ ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡುವ ಮುನ್ನ ಉಗ್ರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಲ್ಲ ರಾಜ್ಯಗಳು ಕಟ್ಟೆಚ್ಚರ­ ವಹಿಸಬೇಕು ಎಂದು ತಾಕೀತು ಮಾಡಿದೆ.

ಜನದಟ್ಟಣೆಯ ಪ್ರದೇಶಗಳು, ಶಾಲೆ­ಗಳು, ರೈಲು ಹಾಗೂ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇಡುವಂತೆಯೂ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿ­ವಾಲ­ಯ ನಿರ್ದೇಶನ ನೀಡಿದೆ.

‘ಶಾಲೆಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ತುರ್ತಾಗಿ ಭದ್ರತೆ­ ಹೆಚ್ಚಿಸಬೇಕಾಗಿದೆ.

ಜನ­ವರಿ ಅಂತ್ಯದವರೆಗೂ ಭದ್ರತಾ ಪಡೆಗಳು, ಗುಪ್ತಚರ ಸಂಸ್ಥೆ­ಗಳು ಕಟ್ಟೆಚ್ಚರಿಂದ ಇರಬೇಕಾ­ಗುತ್ತದೆ’ ಎಂದು ಗೃಹ ಸಚಿವಾಲಯದ

ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ದೆಹಲಿ, ಮುಂಬೈನ  ಪ್ರಮುಖ ಶಾಲೆಗಳು, ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶದ ಕೆಲವು ವಸತಿ ಶಾಲೆಗಳಿಗೆ ಪ್ರತ್ಯೇಕವಾಗಿ ಸೂಚನೆ­ ನೀಡ­ಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಹೋಟೆಲ್‌ಗಳ ಮೇಲೆ ದಾಳಿಗೆ ಸಂಚು
ದೆಹಲಿಯ ಎರಡು ಹೋಟೆಲ್‌ಗಳ ಮೇಲೆ ಹಾಗೂ ದೆಹಲಿ ಮತ್ತು ಆಗ್ರಾ ಹೆದ್ದಾರಿಯಲ್ಲಿ ದಾಳಿ ನಡೆಸುವುದಕ್ಕೆ ಲಷ್ಕರ್‌ ಎ ತಯಬಾ (ಎಲ್‌ಇಟಿ) ಕಣ್ಣಿಟ್ಟಿದೆ ಎಂದೂ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ಉಗ್ರರ ದಾಳಿಯನ್ನು ಎದುರಿಸು­ವುದು ಹೇಗೆ ಎನ್ನು­ವು­ದಕ್ಕೆ ಸೂಕ್ಷ್ಮ ಸ್ಥಳಗ­ಳಲ್ಲಿ  ಅಣಕು ಕಾರ್ಯಾ­ಚರಣೆ ನಡೆಸುವಂತೆಯೂ ಗೃಹ ಸಚಿವಾಲಯ ರಾಜ್ಯ­ಗಳಿಗೆ ಸಲಹೆ ಕೊಟ್ಟಿದೆ. ಮಧ್ಯಪ್ರದೇಶದ ಖಂಡ್ವಾ ಜೈಲಿನಿಂದ ತಪ್ಪಿಸಿ­ಕೊಂಡ  ‘ಸಿಮಿ’ ಸಂಘಟನೆಯ ಸದ­ಸ್ಯ­ರಿಂದ, ಪಾಕಿ­ಸ್ತಾನದಲ್ಲಿರುವ ಇಂಡಿ­ಯನ್‌ ಮುಜಾ­ಹಿ­­ದ್ದೀನ್‌ (ಐಎಂ), ಎಲ್‌ಇಟಿಯಿಂದ ದಾಳಿ ಬೆದರಿ­ಕೆ ಸಾಧ್ಯತೆ ಇದೆ ಎಂದೂ ಕೇಂದ್ರ ಎಚ್ಚರಿಕೆ ನೀಡಿದೆ.

ಐ.ಎಸ್ ಬೆಂಬಲಿಗರು  ಸಿಡ್ನಿ ಕೆಫೆ ದಾಳಿ ಮಾದರಿ­ಯಲ್ಲಿ ಏಕಾಂಗಿ ದಾಳಿ ನಡೆಸುವ ಸಾಧ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಮೈಯೆಲ್ಲ ಕಣ್ಣಾಗಿ ತಮ್ಮ ಎಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಪ್ರವೃತ್ತರಾದಲ್ಲಿ ಮಾತ್ರ ಇಂಥ ದಾಳಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.