ADVERTISEMENT

ಕನ್ನಡಿಗ ಕೃಷಿವಿಜ್ಞಾನಿಗೆ ಜಪಾನ್‌ ಪ್ರಶಸ್ತಿ

ಐಸಿಆರ್‌ಐಎಸ್‌ಎಟಿಯ ಲಕ್ಷ್ಮೀಪತಿ ಗೌಡರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಹೈದರಾಬಾದ್‌ (ಪಿಟಿಐ): ಇಲ್ಲಿನ ಅಂತರ­ರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ  ಸಂಸ್ಥೆ (ಐಸಿಆರ್‌­ಐಎಸ್‌ಎಟಿ) ಉಪ ಮಹಾನಿರ್ದೇಶಕ­ರಾಗಿ­ರುವ  ಕನ್ನಡಿಗ ಕೃಷಿವಿಜ್ಞಾನಿ ಡಾ. ಸಿ.ಎಲ್. ಲಕ್ಷ್ಮೀಪತಿ ಗೌಡ ಅವರಿಗೆ ಪ್ರಸಕ್ತ ಸಾಲಿನ ಜಪಾನ್‌ನ ಪ್ರತಿಷ್ಠಿತ  ಸ್ಯಾನೊ ಟೌಜ್‌ಬುರೊ ವಿಶೇಷ ಪ್ರಶಸ್ತಿ ಲಭಿಸಿದೆ.

ಕೃಷಿ ಸಂಶೋಧನೆಗಾಗಿ ಜಪಾನ್‌ನ ನಿಗಾತಾ ಅಂತರರಾಷ್ಟ್ರೀಯ ಆಹಾರ ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿ ನೀಡಿದೆ.
ಅಂತರರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ  ಸಂಸ್ಥೆ ಯಲ್ಲಿ ಲಕ್ಷ್ಮೀಪತಿ ಗೌಡ ಅವರು 40 ವರ್ಷಗಳಿಂದ ಕೃಷಿ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಏಷ್ಯಾ ಹಾಗೂ ಆಫ್ರಿಕಾದ  ಒಣ ಪ್ರದೇಶ­ಗಳ ಸಣ್ಣ ಹಿಡುವಳಿದಾರರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ  ಗೌಡ ಅವರು ನೀಡಿದ ಕೊಡುಗೆ ಹಾಗೂ ಕೈಗೊಂಡ ಸಂಶೋ­ಧನೆಯನ್ನು ಪರಿ­ಗಣಿಸಿ ಈ ಪ್ರಶಸ್ತಿ ನೀಡ­­ಲಾ­ಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಜಪಾನ್ ನಿಗಾತಾ ಟಕಿ ಮೆಸ್ಸೆ ಅಂತರ­­ರಾಷ್ಟ್ರೀಯ ಸಭಾಂಗಣದಲ್ಲಿ ಬುಧ­­ವಾರ ನಡೆದ  ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕ­ರಿಸಿ ಮಾತನಾಡಿದ ಅವರು,   ‘ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ನನಗೆ ಸಂತೋಷವಾಗಿದೆ.  ನಾಲ್ಕು ದಶಕಗಳ ನನ್ನ ಸೇವೆಗೆ ದೊರೆತ ಪ್ರತಿ­ಫಲ ಇದು’ ಎಂದು  ಪ್ರತಿಕ್ರಿಯಿಸಿ­ದ್ದಾರೆ.

ಏಷ್ಯಾದ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿರುವ ನಿಗಾತಾ ಅಂತರ­ರಾಷ್ಟ್ರೀಯ ಆಹಾರ ಪ್ರಶಸ್ತಿಯನ್ನು ವಿಶ್ವ ಆಹಾರ ಪ್ರಶಸ್ತಿಗೆ ಸರಿ ಸಮನಾದ ಪುರಸ್ಕಾರ  ಎಂದೇ ಪರಿಗಣಿಸಲಾಗಿದೆ. ಅಧಿಕ ಇಳುವರಿ ನೀಡುವ  ರೋಗ ಹಾಗೂ  ಕೀಟ ನಿರೋಧಕ  ಕಾಬೂಲಿ ಹಾಗೂ ದೇಶಿ ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದ ಶ್ರೇಯ ಗೌಡ ಅವರಿಗೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.