ಮುಂಬೈ (ಐಎಎನ್ಎಸ್): ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ ಆರು ವರ್ಷ ಕಳೆದರೂ ಆ ಕರಾಳ ಛಾಯೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಅಂಥ ಘಟನೆ ಮರುಕಳಿಸದಂತೆ ಈಗ ಕರಾವಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕರಾವಳಿ ಪ್ರದೇಶದಲ್ಲಿನ ಭದ್ರತೆಯ ಲೋಪದಿಂದ ಉಗ್ರರು ದೇಶದೊಳಕ್ಕೆ ನುಗ್ಗಿ ನೂರಾರು ಜನರ ಪ್ರಾಣ ತೆಗೆದಿದ್ದರು. ಇದೀಗ ಕರಾವಳಿಯ ಭದ್ರತೆಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ 74 ಆಟೊಮೆಟಿಕ್ ಐಡೆಂಟಿಫಿಕೇಷನ್ ಸಿಸ್ಟಮ್ (ಎಐಎಸ್) ಹಾಗೂ 46 ಕರಾವಳಿ ರಡಾರ್ಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ವಿಶೇಷ ನಿಗಾ ವ್ಯವಸ್ಥೆ ಹಾಗೂ ನಿರಂತರ ಕಾವಲು ವ್ಯವಸ್ಥೆ ಜಾರಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕರಾವಳಿ ಭದ್ರತಾ ಪಡೆ, ಗಡಿ ಭದ್ರತಾ ಪಡೆ ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳು ಕರಾವಳಿಯಲ್ಲಿ ಹೆಚ್ಚಿನ ಭದ್ರತೆಯ ಹೊಣೆ ಹೊತ್ತಿವೆ. ಇದಲ್ಲದೆ ಇತ್ತೀಚೆಗೆ ಉದ್ಘಾಟನೆಗೊಂಡ ‘ನ್ಯಾಷನಲ್ ಕಮಾಂಡ್ ಕಂಟ್ರೋಲ್ ಕಮ್ಯುನಿಕೇಷನ್ ಅಂಡ್ ಇಂಟೆಲಿಜೆನ್ಸ್ ನೆಟ್ವರ್ಕ್’ ಕೂಡಾ ಕರಾವಳಿ ಭದ್ರತೆಯಲ್ಲಿ ವಿಶೇಷ ನಿಗಾ ವಹಿಸುತ್ತಿದೆ.
‘ಮೀನುಗಾರರಿಗೆ ಅಧಿಕೃತ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಗುರುತಿನ ಚೀಟಿ ಇಲ್ಲದ ಮೀನುಗಾರರಿಗೆ ಸಮುದ್ರಕ್ಕಿಳಿಯಲು ಅವಕಾಶ ನೀಡುವುದಿಲ್ಲ. ನೋಂದಣಿಯಾಗಿರುವ ನೌಕೆಗಳ ಹೊರತಾಗಿ ಅನಧಿಕೃತ ಅಥವಾ ಹೊಸ ನೌಕೆಗಳು ಭಾರತದ ಸಮುದ್ರ ಗಡಿಯಲ್ಲಿ ಕಾಣಿಸಿಕೊಂಡರೆ ಕೂಡಲೆ ಅದನ್ನು ಪತ್ತೆ ಹಚ್ಚುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂಬುದು ಅಧಿಕಾರಿಗಳ ಮಾತು.
2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್, ರೈಲು ನಿಲ್ದಾಣ ಸೇರಿದಂತೆ ಹಲವು ಕಡೆ ನಡೆದ ಉಗ್ರರ ದಾಳಿಯಲ್ಲಿ 26 ವಿದೇಶೀಯರು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. 10 ಮಂದಿ ಪಾಕಿಸ್ತಾನಿ ಉಗ್ರರು ಸುಮಾರು 60 ಗಂಟೆಗಳ ಕಾಲ ಉಗ್ರರು ಮುಂಬೈ ಸೇರಿದಂತೆ ಇಡೀ ದೇಶವನ್ನು ತಲ್ಲಣಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.