ADVERTISEMENT

ಕಾಂಗೊ ಪ್ರಜೆ ಹತ್ಯೆ: ಕಠಿಣ ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಮೇ 2016, 7:21 IST
Last Updated 30 ಮೇ 2016, 7:21 IST
ಕಾಂಗೊ ಪ್ರಜೆ ಹತ್ಯೆ: ಕಠಿಣ ಕ್ರಮದ ಭರವಸೆ
ಕಾಂಗೊ ಪ್ರಜೆ ಹತ್ಯೆ: ಕಠಿಣ ಕ್ರಮದ ಭರವಸೆ   

ನವದೆಹಲಿ(ಪಿಟಿಐ): ಕಾಂಗೊ ದೇಶದ ಪ್ರಜೆಯ ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತ, ದೆಹಲಿಯಲ್ಲಿ ಈಚೆಗೆ ಹತ್ಯೆಗೀಡಾದ ಕಾಂಗೊ ಪ್ರಜೆ ಮಸೊಂದಾ ಕೆಟಾಡ ಅಲಿವರ್ ಅವರ ಕುಟುಂಬಕ್ಕೆ ಭರವಸೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕಾಂಗೊ ಪ್ರಜೆ ಮಸೊಂದಾ ಕೆಟಾಡ ಅಲಿವರ್‌ ಅವರ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಹತ್ಯೆಯಾಗಿರುವ ಮಸೊಂದಾ ಕೆಟಾಡ ಅಲಿವರ್‌ ಅವರ ಮೃತ ದೇಹವನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಸರ್ಕಾರ ಬರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ.

ಭಾರತ ಸರ್ಕಾರ ನೀಡಿದ ಸಹಾಯಕ್ಕೆ ಅಲಿವರ್‌ ಅವರ ಕುಟುಂಬದ ಸದಸ್ಯರು ಧನ್ಯವಾದ ಹೇಳಿದರು. ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಸೂಚನೆ ನಿಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನವದೆಹಲಿಯ ವಸಂತ್‌ ಕುಂಜ್‌ನಲ್ಲಿ ಮೇ 20ರಂದು ಮಸೊಂದಾ ಕೆಟಾಡ ಅಲಿವರ್‌ ಹತ್ಯೆ ನಡೆದಿತ್ತು.

ಆಫ್ರಿಕಾ ದೇಶಗಳ ಪ್ರಜೆಗಳು ‘ಜನಾಂಗೀಯ ದ್ವೇಷ’ಕ್ಕೆ ಗುರಿಯಾಗುತ್ತಿದ್ದಾರೆ ಎಂದು ಆಫ್ರಿಕಾ ದೇಶಗಳ ರಾಯಭಾರಿಗಳು ಆರೋಪಿಸಿದ್ದು, ‘ನಮ್ಮ ದೇಶದ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸಬೇಕು’ ಎಂದು  ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.