ADVERTISEMENT

ಕಾಂಗ್ರೆಸ್‌ಗೆ ಕಪಾಳ ಮೋಕ್ಷ: ಬಿಜೆಪಿ ಮುಖಂಡ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್‌ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶದಿಂದ ಕಾಂಗ್ರೆಸ್‌ಗೆ ಕಪಾಳ ಮೋಕ್ಷವಾದಂತಾಗಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ  ಅವರ ಖುದ್ದು ಹಾಜರಾತಿಯ ವಿನಾಯಿತಿಗೂ ಸಹ ಷರತ್ತು ವಿಧಿಸಲಾಗಿದೆ. ವಿಚಾರಣೆಯನ್ನು ಸಹ ಆರೋಪಿಗಳಾಗಿಯೇ ಎದುರಿಸಬೇಕು. ಹೀಗಾಗಿ ಕಾಂಗ್ರೆಸ್‌ ಮುಖಂಡರಿಗೆ ಹಿನ್ನಡೆಯಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ ತಿಳಿಸಿದರು.

ಕಾಂಗ್ರೆಸ್‌ ಸ್ವಾಗತ: ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್‌ ಸಿಬಲ್‌, ‘ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಸ್ವಾಗತಾರ್ಹ. ನಮಗೆ ಸಂತೋಷವಾಗಿದೆ. ತಪ್ಪು ಮತ್ತು ದುರುದ್ದೇಶದಿಂದ ಸುಬ್ರಮಣಿಯನ್‌ ಸ್ವಾಮಿ ಮಾಡಿರುವ ಆರೋಪಗಳನ್ನು ಬಯಲಿಗೆಳೆಯುವ ಅವಕಾಶ ಈಗ ನಮಗೆ ದೊರೆತಿದೆ’ ಎಂದು ತಿಳಿಸಿದರು.

ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿರುವ ಕೆಲವು ವಿಷಯಗಳನ್ನು ತೆಗೆದು ಹಾಕುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿರುವುದು ಮಹತ್ವದ್ದಾಗಿದೆ. ಇದರಿಂದಲೇ ಸೋನಿಯಾ, ರಾಹುಲ್‌ ಸೇರಿದಂತೆ ಯಾವುದೇ ಕಾಂಗ್ರೆಸ್‌ ನಾಯಕ ಅಕ್ರಮವೆಸಗಿದ್ದಾರೆ ಎಂದು ಯಾರೂ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಸುಪ್ರೀಂಕೋರ್ಟ್‌ ಈಗ ನೀಡಿರುವ ಆದೇಶದಿಂದ ಈ ಪ್ರಕರಣದಲ್ಲಿ ಸುಬ್ರಮಣಿಯನ್‌ ಸ್ವಾಮಿ  ಸೋತಂತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.