ಚೆನ್ನೈ (ಪಿಟಿಐ): ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೊ) ಕಳೆದ ನವೆಂಬರ್ನಲ್ಲಿ ಉಡ್ಡಯನ ಮಾಡಿದ್ದ ಮಂಗಳ ನೌಕೆ (ಮಾರ್ಸ್ ಆರ್ಬಿಟರ್ ಮಿಷನ್) ಕೆಂಪು ಕಾಯದ ಸಮೀಪಕ್ಕೆ ಬಂದಿದೆ ಎಂದು ಇಸ್ರೊ ಮಂಗಳವಾರ ಹೇಳಿದೆ.
ಈಗಾಗಲೇ ಮಂಗಳಯಾನ ನೌಕೆಯು 540 ದಶಲಕ್ಷ ಕಿ.ಮೀಗಳನ್ನು (ಶೇ 80ರಷ್ಟು ದೂರ) ಕ್ರಮಿಸಿದ್ದು, ಗುರಿಯೆಡೆಗೆ ನಿರಾತಂಕವಾಗಿ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 24ರಂದು ನೌಕೆ ಮಂಗಳನ ಅಂಗಳದಲ್ಲಿ ಇಳಿಯಲಿದೆ.
ಇಸ್ರೊ ರೂ 450 ಕೋಟಿ ವೆಚ್ಚದಲ್ಲಿ ಮಂಗಳಯಾನ ಯೋಜನೆ ಕೈಗೆತ್ತಿಕೊಂಡಿದೆ. 2014ರ ಮಾರ್ಚ್ 31ರವರೆಗೆ ರೂ 349 ಕೋಟಿ ಖರ್ಚಾಗಿದೆ. 2013ರ ನವೆಂಬರ್ 5ರಂದು ಈ ನೌಕೆ ಉಡಾವಣೆ ಮಾಡಲಾಗಿತ್ತು.
ಭಾರತದ ಮೊತ್ತ ಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳಯಾನ’. ಐದು ಹಂತಗಳಲ್ಲಿ ಪೂರ್ವ ಯೋಜಿತ ದೂರ ತಲುಪುವಲ್ಲಿ ಯಶಸ್ವಿಯಾಗಿರುವ ನೌಕೆಯು ‘ಕೆಂಪು ಗ್ರಹ’ವನ್ನು ಸೆ. 24ರಂದು ತಲುಪುವ ಮೂಲಕ 10 ತಿಂಗಳ ‘ದೂರ ಯಾನ’ವನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೊ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.