ADVERTISEMENT

ಕೋಲಿ ಗಲ್ಲು ತಡೆ ಅವಧಿ ವಿಸ್ತರಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 9:01 IST
Last Updated 12 ಸೆಪ್ಟೆಂಬರ್ 2014, 9:01 IST

ನವದೆಹಲಿ (ಪಿಟಿಐ): ನಿಥಾರಿ ಸರಣಿ ಹಂತಕ ಸುರಿಂದರ್‌ ಕೋಲಿ ಅವರ ಗಲ್ಲು ಶಿಕ್ಷೆಗೆ ಕಳೆದ ಸೋಮವಾರ ಕೊನೆಯ ಕ್ಷಣದಲ್ಲಿ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್‌ ಶುಕ್ರವಾರ ಅದನ್ನು ಅಕ್ಟೋಬರ್‌ 29ರ ವರೆಗೂ ವಿಸ್ತರಿಸಿದೆ.

2006ರಲ್ಲಿ ನಡೆದ ಪ್ರಕರಣದಲ್ಲಿ ಮರಣ ದಂಡನೆಯನ್ನು ಎತ್ತಿ ಹಿಡಿದ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಕೋಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ನಡೆಸಿದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಎಚ್‌.ಎಲ್.ದತ್ತು ಅವರ ನೇತೃತ್ವದ ಪೀಠವು ಈ ಆದೇಶ ನೀಡಿದೆ.

ಎ.ಆರ್‌.ದವೆ ಹಾಗೂ ಎಸ್.ಎ.ಬೊಬ್ಡೆ ಅವರು ತ್ರಿಸದಸ್ಯ ಪೀಠದ  ಇತರ ಇಬ್ಬರು ನ್ಯಾಯಮೂರ್ತಿಗಳು.

ADVERTISEMENT

ಮರಣದಂಡನೆ ಶಿಕ್ಷೆ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪರ ವಕೀಲರ ವಾದವನ್ನು ಮೂವರು ನ್ಯಾಯಮೂರ್ತಿಗಳ ಪೀಠವು ನಿಖರವಾಗಿ 30 ನಿಮಿಷಗಳ ಕಾಲ ಆಲಿಸಿದ್ದು ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿ ಇದೇ ಮೊದಲು.

ಸೆಪ್ಟಂಬರ್‌ 8ರಂದು ನ್ಯಾಯಮೂರ್ತಿಗಳಾದ ದತ್ತು ಹಾಗೂ ಎ.ಆರ್‌.ದವೆ ಅವರಿದ್ದ ಪೀಠವು ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಒಳಗಾಗಿರುವ ಸುರಿಂದರ್ ಕೋಲಿ ಅವರ ಗಲ್ಲಿಗೆ ಒಂದು ವಾರಗಳ ತಡೆ ನೀಡಿತ್ತು.

ಕೋಲಿಯನ್ನು ಸೋಮ­ವಾರ (ಸೆ.8) ಬೆಳಿಗ್ಗೆ 5.30ಕ್ಕೆ ಮೀರಠ್‌ ಜೈಲಿನಲ್ಲಿ ನೇಣಿಗೆ ಹಾಕಲು ಸಿದ್ಧತೆ ನಡೆಸಲಾಗಿತ್ತು. 42 ವರ್ಷದ ಕೋಲಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ನೇತೃತ್ವದ ವಕೀಲರ ತಂಡ ಹಿಂದಿನ ರಾತ್ರಿ (ಸೆ.7ರಂದು) ಪುನರ್‌ಪರಿಶೀಲನಾ ಅರ್ಜಿಯನ್ನು ದಾಖಲಿಸಿತ್ತು.

ಮರಣದಂಡನೆಗೆ ಒಳಗಾದ ಕೈದಿಗಳ ಪುನರ್‌­ಪರಿ­ಶೀಲನಾ ಅರ್ಜಿಯ ವಿಚಾರಣೆ­ಯನ್ನು ಬಹಿರಂಗವಾಗಿ ಮೂವರು ನ್ಯಾಯಮೂರ್ತಿ­ಗಳನ್ನು ಒಳಗೊಂಡ ಪೀಠವು ನಡೆಸ­ಬೇಕು ಎಂದು ಸುಪ್ರೀಂ­ಕೋರ್ಟ್‌ನ ಸಂವಿ­ಧಾನ ಪೀಠವು  2014ರ ಸೆಪ್ಟಂಬರ್ 2 ರಂದು ನೀಡಿರುವ ಬಹು­ಮತದ ಆದೇಶನ್ವಯ ಗಲ್ಲಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತತ್ಪರಿಣಾಮವಾಗಿ ನ್ಯಾಯಮೂರ್ತಿಗಳಾದ ದತ್ತು ಹಾಗೂ ದವೆ ಅವರಿದ್ದ ಪೀಠವು, ಕೋಲಿ ಗಲ್ಲಿಗೆ ಒಂದು ವಾರಗಳ ಕಾಲ ತಡೆ ನೀಡಿ ಸೋಮವಾರ (ಸೆ 8ರಂದು) ನಸುಕಿನ 1:40ಕ್ಕೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.