ನವದೆಹಲಿ (ಪಿಟಿಐ): ಚಾಚಾ ಚೌಧರಿ, ರಾಮನ್ ಮತ್ತಿತರ ಜನಪ್ರಿಯ ವ್ಯಂಗ್ಯಚಿತ್ರಗಳ ಜನಕ ಪ್ರಾಣ್ ಕುಮಾರ್ ಶರ್ಮಾ (75) ಅವರು ಗುಡಗಾಂವ್ನಲ್ಲಿ ಬುಧವಾರ ನಿಧನರಾದರು.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಗುಡಗಾಂವ್ನ ಮೇದಾಂತ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಿಧನರಾದರು ಎಂದು ಡೈಮಂಡ್ ಕಾಮಿಕ್ಸ್ ಪ್ರಕಾಶಕ ಗುಲ್ಶನ್ ರೈ ತಿಳಿಸಿದ್ದಾರೆ.
ಪ್ರಾಣ್ ಅವರು ಪಾಕಿಸ್ತಾನದ ಲಾಹೋರ್ನ ಕಾಸರ್ನಲ್ಲಿ 1938ರಲ್ಲಿ ಜನಿಸಿದ್ದರು. 1960ರಲ್ಲಿ ದೆಹಲಿಯ ‘ಮಿಲಪ್’ ದಿನಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಹಿಂದಿ ಪತ್ರಿಕೆ ‘ಲಾಪ್ಟಾಪ್’ನಲ್ಲಿ ‘ಚಾಚಾ ಚೌಧರಿ’ ವ್ಯಂಗ್ಯಚಿತ್ರ ಪಾತ್ರದ ಮೂಲಕ ಜನಪ್ರಿಯರಾಗಿದ್ದರು.
ಅವರ ಅನೇಕ ವ್ಯಂಗ್ಯಚಿತ್ರ ಸರಣಿಗಳು ಭಾರತದ ಪ್ರಾದೇಶಿಕ ಪತ್ರಿಕೆಗಳಲ್ಲಿ ಅನುವಾದದೊಂದಿಗೆ ಪ್ರಕಟವಾಗಿವೆ. ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಾಣ್ ಅವರ ‘ರಾಮನ್’ ಮತ್ತು ‘ಪುಟ್ಟಿ’ ಸರಣಿಗಳು ಪ್ರಕಟವಾಗಿವೆ.
ಹಾಸ್ಯ ಉಚಿತ ಮತ್ತು ಅದನ್ನು ಸುಲಭವಾಗಿ ಬಳಸಬಹುದು ಎನ್ನುತ್ತಿದ್ದ ಪ್ರಾಣ್, ತಮ್ಮ ಓದುಗರಿಗೆ ಸದಾ ಸಂತೋಷವಾಗಿರಿ. ನಿಮ್ಮ ಸಾಮರ್ಥ್ಯ ಮತ್ತು ಕೌಶಲದ ಮೇಲೆ ನಂಬಿಕೆ ಇಡಿ ಎನ್ನುತ್ತಿದ್ದರು.
ಮಧ್ಯಮವರ್ಗದ ಪ್ರತಿನಿಧಿ
ತಮ್ಮ ವ್ಯಂಗ್ಯಚಿತ್ರದ ಕಥಾನಾಯಕ ಭಾರತದ ಮಧ್ಯಮವರ್ಗವನ್ನು ಪ್ರತಿನಿಧಿಸಬೇಕು. ಒಂದರ್ಥದಲ್ಲಿ ಆತ ಇಡೀ ಭಾರತದ ಪ್ರನಿನಿಧಿ. ಈ ಹಿನ್ನೆಲೆಯಲ್ಲೇ, ಚಾಚಾ ಚೌಧರಿ ಎಂಬ ಕಥಾಪಾತ್ರವನ್ನು ಸೃಷ್ಟಿಸಿದೆ. ಆತನ ಮಿದುಳು ಕಂಪ್ಯೂಟರ್ಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಪ್ರಾಣ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮೋದಿ ಟ್ವೀಟ್: ‘ತಮ್ಮ ಗೆರೆಗಳ ಮೂಲಕ ಜನ ಸಾಮಾನ್ಯರ ಮುಖದಲ್ಲಿ ನಗೆಯರಳಿಸಲು ಯತ್ನಿಸಿದ ಕಲಾವಿದ ಪ್ರಾಣ್’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.