ಚಂಡೀಗಡ: ‘ತಡರಾತ್ರಿವರೆಗೂ ಯುವತಿ ಏಕೆ ತಿರುಗಬೇಕು. ಪೋಷಕರು ತಮ್ಮ ಮಕ್ಕಳನ್ನು ರಾತ್ರಿವರೆಗೂ ಮನೆಯಿಂದ ಹೊರಗೆ ಇರಲು ಅವಕಾಶ ನೀಡಬಾರದು. ರಾತ್ರಿವರೆಗೂ ತಿರುಗಾಡುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿಕೆ ನೀಡಿರುವ ಹರಿಯಾಣ ಬಿಜೆಪಿ ಘಟಕದ ಉಪಾಧ್ಯಕ್ಷ ರಾಮವೀರ್ ಭಟ್ಟಿ ವಿರುದ್ಧ ಬಿಜೆಪಿ ಶಾಸಕಿ ಕಿರಣ್ ಖೇರ್ ಗರಂ ಆಗಿದ್ದಾರೆ.
ಗಂಡು ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಿ, ಹೆಣ್ಣು ಮಕ್ಕಳನ್ನಲ್ಲ ಎಂದು ಭಟ್ಟಿ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಚಂಡೀಗಡದ ಶಾಸಕಿ ಕಿರಣ್, ತಮ್ಮ ಪಕ್ಷದ ಸಹೋದ್ಯೋಗಿಯೊಬ್ಬರು ಈ ರೀತಿ ಹೇಳಿರುವುದು ನನಗೆ ಮುಜುಗರವನ್ನುಂಟುಮಾಡಿದೆ. ರಾತ್ರಿ ಮಾತ್ರ ಯಾಕೆ ಅಪಾಯ ಸಂಭವಿಸುತ್ತದೆ? ಬೆಳಗ್ಗಿನ ಹೊತ್ತು ಸಂಭವಿಸುವುದಿಲ್ಲವೇ?ಹುಡುಗರು ರಾತ್ರಿ ಹೊತ್ತು ಹೊರಗೆ ಹೋಗುವುದು ಬೇಡ ಎಂದು ಹೇಳಲಿ ಎಂದಿದ್ದಾರೆ.
ಹಿಂಬಾಲಿಸುವಿಕೆ ಪ್ರಕರಣದ ಬಗ್ಗೆ ಬಿಜೆಪಿ ನಾಯಕಿಯೊಬ್ಬರು ಪ್ರತಿಕ್ರಿಯಿಸಿದ್ದು ಇದೇ ಮೊದಲು.
ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ (23) ಮತ್ತು ಅವರ ಸ್ನೇಹಿತ ಆಶೀಷ್ ಕುಮಾರ್ (27) ಕಳೆದ ಶುಕ್ರವಾರ ರಾತ್ರಿ ಚಂಡೀಗಡ ನಗರದಲ್ಲಿ ಯುವತಿಯನ್ನು ಕಾರಿನಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮವೀರ್ ಭಟ್ಟಿ ಈ ರೀತಿ ಹೇಳಿಕೆ ನೀಡಿದ್ದರು.
ಭಟ್ಟಿ ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಕಾಸ್ ಬರಲಾ ಅವರ ವಿರುದ್ಧ ದೂರು ನೀಡಿರುವ ವರ್ಣಿಕಾ ಕುಂದು ಅವರ ಅಪ್ಪ ವಿರೇಂದ್ರ ಕುಂದು, ಭಟ್ಟಿ ಹೇಳಿಕೆ ಪೂರ್ವಗ್ರಹದಿಂದ ಕೂಡಿದ್ದು. ನನ್ನ ಕುಟುಂಬದವರಿಗೆ ಏನು ಮಾಡಬೇಕು? ಯಾವಾಗ ಮಾಡಬೇಕು? ಎಂಬುದು ನನಗೆ ಗೊತ್ತಿದೆ. ಆ ಬಗ್ಗೆ ಮೂಗು ತೂರಿಸಲು ಅವರ್ಯಾರು ಎಂದು ಗುಡುಗಿದ್ದಾರೆ. ಇಂಥಾ ಗಂಡಸರು ಇರುವಾಗ ಯಾವುದೇ ಹೆಣ್ಣು ಮಕ್ಕಳು ತಡರಾತ್ರಿ 12 ಗಂಟೆಯಾಗಲೀ 2 ಗಂಟೆ ಅಥವಾ ಬೆಳಗ್ಗಿನ ಜಾವ 4 ಗಂಟೆಯೇ ಆಗಲಿ ಹೊರಗೆ ಹೋಗುವುದು ಸುರಕ್ಷಿತವಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.