ಪಣಜಿ (ಐಎಎನ್ಎಸ್): ಮುಂಬೈಯಿಂದ ಎರ್ನಾಕುಲಂಗೆ ಹೊರಟ್ಟಿದ್ದ ಡುರೊಂಟೊ ಎಕ್ಸ್ಪ್ರೆಸ್ ರೈಲು ಗೋವಾದ ಬಲ್ಲಿ ರೈಲ್ವೆ ನಿಲ್ದಾಣದ ಬಳಿಯ ಸುರಂಗದಲ್ಲಿ ಭಾನುವಾರ ಹಳಿ ತಪ್ಪಿದ್ದು, ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಬೆಳ್ಳಿಗ್ಗೆ 7.15ರ ಸುಮಾರಿಗೆ ಈ ಅವಘಡ ನಡೆದಿದೆ. ಪಣಜಿಯಿಂದ ದಕ್ಷಿಣಕ್ಕೆ 45 ಕಿಲೋ ಮೀಟರ್ ದೂರದಲ್ಲಿರುವ ಸುರಂಗದ ಮೂಲಕ ಹಾದು ಹೋಗುವಾಗ ರೈಲಿನ ಹಿಂದುಗಡೆಯ ಹತ್ತು ಬೋಗಿಗಳು ಹಳಿ ತಪ್ಪಿವೆ.
ಘಟನೆಯಲ್ಲಿ ಸಾವು-ನೋವಿ ಬಗ್ಗೆ ತಿಳಿದು ಬಂದಿಲ್ಲ. ಆದರೆ, ವೈದ್ಯಕೀಯ ವಾಹನ ಹಾಗೂ ಪರಿಹಾರ ರೈಲು ಸ್ಥಳಕ್ಕೆ ಧಾವಿಸಿದೆ ಎಂದು ಕೊಂಕಣ್ ರೈಲ್ವಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಬಾಬನ್ ಘಾಟಗೆ ಅವರು ತಿಳಿಸಿದ್ದಾರೆ.
ಕೊಂಕಣ್ ಮಾರ್ಗವಾಗಿ ಗೋವಾಕ್ಕೆ ತೆರಳುವ ರೈಲುಗಳ ಮಾರ್ಗ ಬದಲಾಯಿಸಲಾಗುವುದು ಅಥವಾ ರದ್ದು ಪಡಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
‘ಅಪಘಾತಕ್ಕೀಡಾಗಿರುವ ರೈಲಿನಲ್ಲಿ ಪ್ರಯಾಣ ಮುಂದುವರೆಸಲು ಇಚ್ಚಿಸದ ಪ್ರಯಾಣಿಕರ ಪೂರ್ಣ ಹಣವನ್ನು ಮರಳಿಸಲಾಗುವುದು' ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆ ಕುರಿತು ಮಾಹಿತಿ ಪಡೆಯಲು ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರು ಕೊಂಕಣ್ ರೈಲ್ವೆ ನಿಲ್ದಾಣಕ್ಕೆ 022–27587939 ದೂರವಾಣಿ ಮೂಲಕ ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.