ADVERTISEMENT

ಚರ್ಚೆ ಆಹ್ವಾನ ತಿರಸ್ಕಾರ

ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸೋನಿಯಾ ಟೀಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ):  ಕೇಂದ್ರ ಸರ್ಕಾರವು ವಿವಾದಾತ್ಮಕ ಭೂಸ್ವಾಧೀನ ತಿದ್ದುಪಡಿ ಮಸೂದೆ ಕುರಿತು ಚರ್ಚೆಗೆ ನೀಡಿರುವ ಆಹ್ವಾನವನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಿರಸ್ಕರಿಸಿದ್ದಾರೆ.ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಯುಪಿಎ ಜಾರಿಗೊಳಿಸಿದ್ದ ಮಸೂದೆಯನ್ನು ಯಥಾವತ್‌ ಮತ್ತೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೋದಿ ಅವರ ನೇತೃತ್ವದ ಸರ್ಕಾರವು ಭೂಸ್ವಾಧೀನ ಮಸೂದೆ ಜಾರಿಗೊಳಿಸಿರುವ ರೀತಿಯು ಮಹತ್ವದ ವಿಷಯಗಳ ಬಗ್ಗೆ ವಿವಿಧ ಪಕ್ಷಗಳ ನಡುವೆ ಒಮ್ಮತಾಭಿಪ್ರಾಯ ಮೂಡಿಸುವ ಸಂಪ್ರದಾಯವನ್ನು ಅಣಕ ಮಾಡುವಂತಿದೆ; ದೂರದೃಷ್ಟಿಯಿಲ್ಲದ ಮೋದಿ ಅವರ ಸರ್ಕಾರವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಹರಸಾಹಸ ಮಾಡುತ್ತಿದೆ ಎಂದು ಸೋನಿಯಾ ಟೀಕಿಸಿದ್ದಾರೆ.

ನಿತಿನ್‌ ಗಡ್ಕರಿ ಅವರು ಕಳೆದ ವಾರ ಸೋನಿಯಾ ಗಾಂಧಿ, ಪ್ರತಿಪಕ್ಷಗಳ ನಾಯಕರು, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದು ಭೂಸ್ವಾಧೀನ ಮಸೂದೆ ಕುರಿತು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು.

ಮತ್ತೆ ಸುಗ್ರೀವಾಜ್ಞೆಗೆ ನಿರ್ಧಾರ
ಏಪ್ರಿಲ್‌ 1ರಂದು ಅನೂರ್ಜಿತಗೊಳ್ಳುವ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸಲು ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಶುಕ್ರವಾರ ನಿರ್ಧರಿಸಿದೆ. ಮುಂದುವರಿದ ಬಜೆಟ್‌ ಅಧಿವೇಶನ ಏ.‌ 20ರಿಂದ ಆರಂಭವಾಗಲಿದ್ದು, ತಕ್ಷಣವೇ ರಾಜ್ಯಸಭೆ ಮುಂದೂಡಲು ಸಮಿತಿ ಶಿಫಾರಸು ಮಾಡಿದೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಎದುರಿಸುತ್ತಿರುವ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸಬೇಕಾದರೆ ಅಧಿವೇಶನ ಸೇರಿರುವ ಸಂಸತ್ತಿನ ಉಭಯ ಸದನಗಳಲ್ಲಿ ಯಾವುದಾದರೂ ಒಂದನ್ನು ಮುಂದೂಡಬೇಕು. ಹೀಗಾಗಿ ರಾಜ್ಯಸಭೆ ಮುಂದೂಡಲು ಸಂಪುಟ ಸಮಿತಿ ಶಿಫಾರಸು ಮಾಡಿದೆ. 

ಗೃಹ ಸಚಿವ ರಾಜನಾಥ್‌ಸಿಂಗ್‌ ಅವರ ಮನೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾದ ವೆಂಕಯ್ಯನಾಯ್ಡು, ಮುಖ್ತಾರ್‌ ಅಬ್ಬಾಸ್‌ ನಕ್ವಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತಿತರರು ಸೇರಿದ್ದರು  ಎಂದು ವೆಂಕಯ್ಯ ನಾಯ್ಡು ಅನಂತರ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.