ADVERTISEMENT

ಚುಮಾರ್‌ನಲ್ಲಿ ಚೀನಾ ಸೇನೆ ಬಿಡಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಲೇಹ್‌/ ನವದೆಹಲಿ (ಪಿಟಿಐ): ಲಡಾಖ್‌ನ ಚುಮಾರ್‌ ಗಡಿ ಪ್ರದೇ­ಶ­ದಲ್ಲಿ ಭಾರತದ ಭೂಪ್ರದೇಶಕ್ಕೆ ನುಗ್ಗಿರುವ ಚೀನಾ ಸೈನಿಕರು ಭಾನುವಾರ ಏಳು ಬಿಡಾರಗಳನ್ನು ಹಾಕಿ ಠಿಕಾಣಿ ಹೂಡಿದ್ದಾರೆ. ಚೀನಾ ಸೈನಿಕರು ಭಾರತದ ನೆಲದಿಂದ ಹಿಂದೆಗೆ­ಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದಾಗಿ ಇಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ಮುಖಾಮುಖಿ ಮುಂದುವರಿದಿದೆ.

ಭಾರತದ ಸೇನೆಯು ತನ್ನ ನೆಲದಿಂದ ಹಿಂದಕ್ಕೆ ಸರಿಯುವಂತೆ ಎಚ್ಚರಿಕೆ ನೀಡಿದ್ದರೂ ಚೀನಾ ಸೈನಿಕರು ಅಲ್ಲಿಂದ ಕದಲಿಲ್ಲ. 100ಕ್ಕೂ ಹೆಚ್ಚು ಚೀನಾ ಸೈನಿಕರು ಅಲ್ಲಿ  ಬೀಡುಬಿಟ್ಟಿದ್ದಾರೆ. ಚೀನಾ ಹೆಲಿಕಾಪ್ಟರ್‌ಗಳು ಭಾನುವಾರವೂ ತಮ್ಮ ಸೈನಿಕರಿಗೆ ಆಹಾರದ ಪೊಟ್ಟಣಗಳನ್ನು ಸುರಿದವು. ಆದರೆ ಅವು ಈ ಸಂದರ್ಭದಲ್ಲಿ ಭಾರತದ ವಾಯುಗಡಿಯನ್ನು ಉಲ್ಲಂಘಿಸಿಲ್ಲ.

ಭಾರತದ ಸೈನಿಕರು ಕೂಡ ಚುಮಾರ್‌ ಪ್ರದೇಶದಿಂದ ಕಾಲ್ತೆಗೆದರೆ ತಮ್ಮ ಯೋಧರನ್ನು ವಾಪಸ್‌ ಕರೆಸಿಕೊಳ್ಳುವುದಾಗಿ ಚೀನಾ ಸೇನೆ ಹೇಳುತ್ತಿದೆ. ಆದರೆ ತನಗೆ ಸೇರಿದ ನೆಲದಲ್ಲಿ ಸೇನೆಯನ್ನು ನಿಯೋಜಿಸುವುದು ಅಥವಾ ಬಿಡುವುದು ತನ್ನ ನಿರ್ಧಾರವಾಗಿದೆ. ಈ ವಿಷಯದಲ್ಲಿ ಚೀನಾದ ಸೇನೆಯ ನಿರ್ದೇಶನ ಬೇಕಿಲ್ಲ ಎಂಬುದು ಭಾರತದ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.