ADVERTISEMENT

ಜಮ್ಮು–ಕಾಶ್ಮೀರ: ಪಿಡಿಪಿಯತ್ತ ಕಾಂಗ್ರೆಸ್‌ ಒಲವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 10:15 IST
Last Updated 25 ಡಿಸೆಂಬರ್ 2014, 10:15 IST

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೆ ಜನರ ತೀರ್ಪುನ್ನು ಗೌರವಿಸುವ ನಿಟ್ಟಿನಲ್ಲಿ ಪೀಪಲ್ಸ್‌ ಡೆಮೊಕ್ರಟಿಕ್  ಪಕ್ಷದ ವರಿಷ್ಠ ಮುಫ್ತಿ ಮೊಹಮ್ಮದ್ ಸಯೀದ್‌ ಅವರು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲಿ ಎಂದು ಕಾಂಗ್ರೆಸ್‌ ಪಕ್ಷವು ಆಶಯ ವ್ಯಕ್ತಪಡಿಸಿದೆ.

‘ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೊರೆತ ಜನತಾ ತೀರ್ಪನ್ನು ಧ್ವಂಸಗೊಳಿಸಲು ಅಧಿಕಾರದ ಆಸೆಯುಳ್ಳ ಕೆಲ  ರಾಜಕೀಯ ಸಂಘಟನೆಗಳು ಹಾಗೂ ವೈಯಕ್ತಿಕ ಹಿತಾಸಕ್ತಿಯುಳ್ಳವರು ಯತ್ನಿಸುತ್ತಿದ್ದಾರೆ’ ಎಂದು ಜಮ್ಮು–ಕಾಶ್ಮೀರ ಪ್ರದೇಶ ಕಾಂಗ್ರೆಸ್‌ ಕಚೇರಿ ಅಧ್ಯಕ್ಷ ಸೈಫುದ್ದೀನ್ ಸೊಜ್‌ ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಅಲ್ಲದೇ, ‘ಸೌಮ್ಯವಾದಿಯೂ ಅನುಭವಿಯೂ ಹಾಗೂ ದೂರದೃಷ್ಟಿಯುಳ್ಳ ರಾಜಕಾರಣಿಯೂ ಆಗಿರುವ ಸಯೀದ್ ಅವರಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ನೀಡಬೇಕು.  ಸಮಾನ ಮನಸ್ಕ ಪಕ್ಷಗಳು ಅಥವಾ ಸಂಘಟನೆಗಳು ಅವರಿಗೆ ಬೆಂಬಲ ನೀಡಬೇಕು. ಇದು ಜನತಾ ತೀರ್ಪನ್ನು ಗೌರವಿಸುವ ಏಕಮಾತ್ರ ದಾರಿಯಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆಯ ನಿಟ್ಟಿನಲ್ಲಿ ಬಿಜೆಪಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ನಾಯಕರು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಈ ಬೆಳವಣಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಅವರು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.