ADVERTISEMENT

ಜಶೋದಾಬೆನ್‌ ಅರ್ಜಿ: ಚರ್ಚೆಗೆ ಕಾಂಗ್ರೆಸ್‌ ಸದಸ್ಯರ ಯತ್ನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಪ್ರಧಾನಿ ಮೋದಿ ಪತ್ನಿ  ಜಶೋದಾಬೆನ್‌ ಅವರು ತಮಗೆ ನೀಡಿರುವ ಭದ್ರತೆಯ ವಿವರ ಕೇಳಿ ಮಾಹಿತಿ ಹಕ್ಕು ಕಾಯ್ದೆ  ಅಡಿ ಸಲ್ಲಿಸಿ­ರುವ ಅರ್ಜಿ ವಿಷಯವನ್ನು ರಾಜ್ಯಸಭೆ­ಯಲ್ಲಿ ಚರ್ಚಿಸುವುದಕ್ಕೆ ಕಾಂಗ್ರೆಸ್‌್ ಸದ­ಸ್ಯರು ಮುಂದಾದರು. ಆದರೆ ಅಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಕಾಂಗ್ರೆಸ್‌ನ ಮಧುಸೂದನ್‌ ಮಿಸ್ತ್ರಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾ­ಪಿ­ಸಲು ಯತ್ನಿಸಿದರು. ಆದರೆ ಉಪಾ­ಧ್ಯಕ್ಷ ಪಿ.ಜೆ.ಕುರಿಯನ್‌ ಅವರು ‘ ನೀವು ನೋಟಿಸ್‌ ಕೊಡಿ’ ಎಂದು  ಹೇಳಿದರು.

‘ಈ ದಿನದ ಶೂನ್ಯವೇಳೆಯಲ್ಲಿ ೧೫ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಅಧ್ಯ­ಕ್ಷರು ಅವಕಾಶ ನೀಡಿದ್ದಾರೆ. ಕಲಾಪ­­ಪಟ್ಟಿಯಲ್ಲಿರುವ ಎಲ್ಲ ವಿಷಯ­ಗಳು ಪ್ರಮುಖವಾಗಿವೆ’ ಎಂದರು. ಈ ವಿಷಯ ಪ್ರಸ್ತಾಪಿಸುವುದಕ್ಕೆ ನೋಟಿಸ್‌ ಕೊಟ್ಟಿದ್ದಾಗಿ ಮಿಸ್ತ್ರಿ ನೆನಪಿಸಿದರು. ‘ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ನೋಟಿಸ್‌ ಕೊಡಿ. ತೊಂದರೆ ಕೊಡಬೇಡಿ’ ಎಂದು ಕುರಿಯನ್‌ ಹೇಳಿದರು.

ಹೈದರಾಬಾದ್‌ ವಿಮಾನ ನಿಲ್ದಾಣ ವಿವಾದ: ಹೈದ­ರಾಬಾದ್‌ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್‌ ನಾಮಕರಣ ವಿಷಯವಾಗಿ ಕಾಂಗ್ರೆಸ್‌ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಭಾರಿ ಗದ್ದಲ ಎಬ್ಬಿಸಿದರು. ಇದಕ್ಕೆ ರಾಜೀವ್‌ ಗಾಂಧಿ ಅವರ ಹೆಸರನ್ನೇ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌್ ಸದಸ್ಯರು ಶೂನ್ಯವೇಳೆಯಲ್ಲಿ  ಒತ್ತಾಯ ಮಾಡಿದರು. ಈ ಬೇಡಿಕೆಗೆ ಸರ್ಕಾರ ಸೊಪ್ಪು ಹಾಕಲಿಲ್ಲ.

ದೇಶೀಯ ಟರ್ಮಿನಲ್‌ಗೆ ತೆಲುಗು ದೇಶಂ ಸ್ಥಾಪಕ ಎನ್‌.ಟಿ.ರಾಮರಾವ್‌ ಹೆಸರಿಡಲಾಗಿದೆ. ‘ನಾಗರಿಕ ವಿಮಾನ­ಯಾನ ಸಚಿವ ಗಜಪತಿ ರಾಜು ಅವರು ಅಗ್ಗದ ತಂತ್ರ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯರು ಆರೋಪಿಸಿದರು. ‘ನಮಗೆ ಎನ್‌ಟಿಆರ್‌ ಬಗ್ಗೆ ಗೌರವ ಇದೆ. ಆದರೆ ಸರ್ಕಾರವು ದೇಶೀಯ ಟರ್ಮಿನಲ್‌ಗೆ ರಾಜೀವ್‌ ಗಾಂಧಿ ಅವರ ಹೆಸರನ್ನೇ ಉಳಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಆನಂದ್‌ ಭಾಸ್ಕರ್‌್ ರಾಪೊಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.