ಚೆನ್ನೈ (ಪಿಟಿಐ): ‘ಸರ್ಕಾರ ಜಾತ್ಯತೀತ ತತ್ವಕ್ಕೆ ಬದ್ಧವಾಗಿದ್ದು, ಸಂವಿಧಾನದ ಪೂರ್ವ ಪೀಠಿಕೆಯಿಂದ ಆ ಪದವನ್ನು ತೆಗೆಯುವುದಿಲ್ಲ’ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಜಾತ್ಯತೀತ ತತ್ವಕ್ಕೆ ಬದ್ಧವಾಗಿದ್ದೇವೆ. ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಪದವನ್ನು ತೆಗೆದು ಹಾಕುವ ಮಾತೇ ಇಲ್ಲ’ ಎಂದಿದ್ದಾರೆ.
‘ಜಾತ್ಯತೀತ ತತ್ವ ಭಾರತೀಯರಿಗೆ ರಕ್ತಗತವಾಗಿದೆ. ವಾರ್ತಾ ಇಲಾಖೆ ಜಾಹೀರಾತಿಗಾಗಿ ಬಳಸಿರುವ ಪೂರ್ವ ಪೀಠಿಕೆಯ ಚಿತ್ರದಲ್ಲಿ ಜಾತ್ಯತೀತ ಪದ ಇಲ್ಲ ಎಂಬ ಕಾರಣಕ್ಕೆ ಈಗ ಸಂವಿಧಾನದಿಂದ ಆ ಪದವನ್ನು ತೆಗೆದು ಹಾಕಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಕೆಲವರಿಗೆ ವಿವಾದ ಹುಟ್ಟು ಹಾಕುವುದೇ ಕೆಲಸವಾಗಿದೆ. ಸಾಕಷ್ಟು ಚರ್ಚೆ ನಡೆಸಿದ ಬಳಿಕವೇ ಮೂಲ ಸಂವಿಧಾನದ ಪೀಠಿಕೆಯ ಚಿತ್ರವನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗಿದೆ. ಈ ವಿಚಾರದಲ್ಲಿ ವಿವಾದ ಅನವಶ್ಯಕ’ ಎಂದು ಅವರು ಹೇಳಿದ್ದಾರೆ.
66ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯು ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ಇಲ್ಲದ ಮೂಲ ಸಂವಿಧಾನದ ಪೀಠಿಕೆಯ ಚಿತ್ರವುಳ್ಳ ಜಾಹೀರಾತನ್ನು ಪ್ರಕಟಿಸಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡು ಶಿವಸೇನೆ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಪೀಠಿಕೆಯಿಂದ ತೆಗೆದು ಹಾಕಲು ಒತ್ತಾಯಿಸಿತ್ತು.
1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸೇರಿಸಲಾಗಿದೆ. 42ನೇ ತಿದ್ದುಪಡಿಗೂ ಮುಂಚಿನ ಸಂವಿಧಾನದ ಪ್ರತಿಗಳ ಪೀಠಿಕೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.