ADVERTISEMENT

ಡಬ್ಲುಟಿಒದಲ್ಲೂ ಭಾರತಕ್ಕೆ ಬಲ; ಟಿಎಫ್‌ಎಗೆ ಅಸ್ತು

ಆಹಾರ ದಾಸ್ತಾನು ಪ್ರಮಾಣಕ್ಕೆ ಮಿತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಜಿನೀವಾ/ ನವದೆಹಲಿ (ಪಿಟಿಐ): ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲುಟಿಒ) ಭಾರತದ ಆಹಾರ ದಾಸ್ತಾನು ಪ್ರಮಾಣದ ಮೇಲೆ ಯಾವುದೇ ಮಿತಿ ಹೇರದೆ ‘ಸುಗಮ ವ್ಯಾಪಾರ ಒಪ್ಪಂದ’ಕ್ಕೆ (ಟಿಎಫ್‌ಎ) ಗುರುವಾರ ರಾತ್ರಿ ಅನುಮೋದನೆ ನೀಡಿದೆ. ಇದರಿಂದ ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಒಪ್ಪಂದಕ್ಕೆ ಅಂಗೀಕಾರ ಸಿಕ್ಕಂತೆ ಆಗಿದೆ.

ಆಹಾರ ದಾಸ್ತಾನು ಪ್ರಮಾಣ ವಿಷಯಕ್ಕೆ ಸಂಬಂಧಿಸಿದಂತೆ ಕಾಯಂ ಪರಿಹಾರ ಹುಡುಕುವ ತನಕ ‘ಶಾಂತಿ ಕರಾರು’ ಮುಂದುವರಿಸಬೇಕು ಎಂಬುದು ಭಾರತದ ಒತ್ತಾಯ­ವಾಗಿತ್ತು. ಈಗ ಈ ಬೇಡಿಕೆಗೆ ಡಬ್ಲುಟಿಒ ಸ್ಪಂದಿಸಿದೆ.

‘ಶಾಂತಿ ಕರಾರಿ’ನ ಮುಂದುವರಿಕೆ­ಯಿಂದಾಗಿ ಯಾವುದೇ ರಾಷ್ಟ್ರವು ಎಷ್ಟೇ ಪ್ರಮಾಣದಲ್ಲಿ ಆಹಾರ ದಾಸ್ತಾನು ಮಾಡಿದರೂ ಬೇರ್‍್ಯಾವುದೇ ಡಬ್ಲುಟಿಒ ಸದಸ್ಯ ರಾಷ್ಟ್ರವು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಖಟ್ಲೆ ಹೂಡಲು ಅವಕಾಶ ಇರುವುದಿಲ್ಲ.
ಡಬ್ಲುಟಿಒ ಮಹಾ ನಿರ್ದೇಶಕ ರಾಬರ್ಟೊ ಅಜೆವೆಡೊ ಅವರು ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿ, ‘ಬಹು ಆಯಾಮಗಳ ವಾಣಿಜ್ಯ ಸಂಘಟನೆಗೆ ಇದೊಂದು ಮಹತ್ವದ ಸಂದರ್ಭವಾಗಿದೆ’ ಎಂದಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಮುನ್ನ, ಆಹಾರ ದಾಸ್ತಾನು ಪ್ರಮಾಣಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಇದ್ದ ಬಿಕ್ಕಟ್ಟು ಬಗೆಹರಿದಿತ್ತು. ಆಗ ಭಾರತದ ಪ್ರತಿಪಾದನೆಗೆ ಮೊದಲ ಹಂತದ ಗೆಲುವು ಸಿಕ್ಕಿತ್ತು.

‘ಭಾರತಕ್ಕೆ ಗೆಲುವು’
ನವದೆಹಲಿ (ಪಿಟಿಐ):
ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲುಟಿಒ) ಜಿನೀವಾ­ದಲ್ಲಿ ಗುರುವಾರ ರಾತ್ರಿ ಭಾರತದ ಬೇಡಿಕೆ ಒಪ್ಪಿಕೊಂಡು ಟಿಎಫ್ಎ ಅನು­ಮೋದಿ­­ಸಿರುವುದು ಭಾರತಕ್ಕೆ ಸಿಕ್ಕ ಮಹತ್ವದ ಗೆಲು­ವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.

ವಾಣಿಜ್ಯ ಸಚಿವೆ ನಿರ್ಮಲಾ ಸೀತಾ­ರಾಮನ್‌ ಅವರು ಶುಕ್ರವಾರ ಸದನ­ದಲ್ಲಿ ಈ ಕುರಿತು ಸ್ವಯಂ­ಪ್ರೇರಿತ ಹೇಳಿಕೆ ನೀಡಿದರು.
ಇದರಿಂದಾಗಿ ಭಾರತವು ಯಾವುದೇ ರಾಜಿ ಮಾಡಿ­ಕೊಳ್ಳದೆ ತನ್ನ ಆಹಾರ ಭದ್ರತಾ ಯೋಜನೆಗಳನ್ನು ಮುಂದುವರಿಸಬಹುದು. ಅಲ್ಲದೇ ರೈತರ ಉತ್ಪನ್ನ­ಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೂಡ ಯಾವುದೇ ತೊಡಕಾಗದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.