ADVERTISEMENT

’ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯಗೊಳಿಸುತ್ತಿರುವ ಪ್ರಧಾನಿ ಮೋದಿ’

ಏಜೆನ್ಸೀಸ್
Published 30 ಏಪ್ರಿಲ್ 2017, 10:16 IST
Last Updated 30 ಏಪ್ರಿಲ್ 2017, 10:16 IST
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಬೆನ್ನಲ್ಲೇ ಸಿಪಿಐ ಸಹ ಇದೇ ಆರೋಪ ಮಾಡಿದೆ.

‘ಎಲ್ಲ ಧರ್ಮ ಮತ್ತು ಸಮುದಾಯಕ್ಕೆ ಸೇರಿದ ಮತ್ತು ಪ್ರಮುಖ ವಿಷಯಗಳ ಬಗ್ಗೆ ಮೋದಿ ಮಾತನಾಡಬೇಕಿದೆ’ ಎಂದು ಸಿಪಿಐ ನಾಯಕ ಡಿ. ರಾಜ ಹೇಳಿದ್ದಾರೆ.

‘ತ್ರಿವಳಿ ತಲಾಖ್ ಅನ್ನು ಕುರಾನ್‌ನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಹೇಳುವ ವರ್ಗವೂ ಮುಸ್ಲಿಮರಲ್ಲಿ ಇದೆ. ಅವರು ಅದನ್ನು ಹೇಳಿಕೊಳ್ಳಲಿ. ಆದರೆ, ಪ್ರಮುಖವಾದ ವಿಚಾರ ಅದಲ್ಲ, ಮಹಿಳೆಯರನ್ನು ಹೇಗೆ ಸಬಲೀಕರಣಗೊಳಿಸಬೇಕು ಎಂಬುದು. ಹೇಗೆ ಲಿಂಗಸಮಾನತೆ ಸಾಧಿಸಬೇಕು ಎಂಬುದು. ಇಂಥ ಮಹತ್ವದ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಲಿ’ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಮಧ್ಯೆ, ತ್ರಿವಳಿ ತಲಾಖ್ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯುವ ಮೂಲಕ ದೇಶವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಧ್ರುವೀಕರಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೇ ಗಮನಹರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಮಧು ಗೌಡ್ ಯಕ್ಷಿ ದೂರಿದ್ದಾರೆ.

‍‍‍‍‍‍[Related]

‘ಕೆಲವೊಮ್ಮೆ ಅವರು (ಪ್ರಧಾನಿ ಮೋದಿ) ಕಬ್ರಿಸ್ತಾನ್ – ಶಮ್‌ಸಾನ್ ಘಾಟ್ ಬಗ್ಗೆ, ಮತ್ತೆ ಕೆಲವೊಮ್ಮೆ ದೀಪಾವಳಿ – ರಂಜಾನ್ ಕುರಿತು ಮಾತನಾಡುತ್ತಾರೆ. ಈಗ ತ್ರಿವಳಿ ತಲಾಖ್ ವಿಚಾರವಾಗಿ ಮಾತನಾಡುತ್ತಿದ್ದಾರೆ. ಅವರು ಒಂದು ಸಮುದಾಯದ ಅಥವಾ ಒಂದು ಧರ್ಮದ ಪ್ರಧಾನಿಯಲ್ಲ. ಹೀಗಾಗಿ ದೇಶ ಮೊದಲು ಎಂದು ಅವರು ಯೋಚಿಸಬೇಕಿದೆ’ ಎಂದು ಮಧು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.