ADVERTISEMENT

ನಕ್ಸಲರೊಂದಿಗೆ ಮತ್ತೆ ಗುಂಡಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 13:06 IST
Last Updated 18 ಏಪ್ರಿಲ್ 2015, 13:06 IST

ರಾಯಪುರ, ಛತ್ತೀಸ್‌ಗಡ್‌(ಪಿಟಿಐ): ಛತ್ತೀಸ್‌ಗಡದ ಬಸ್ತಾರ್‌ ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಶನಿವಾರ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು–ನೋವುಗಳಾಗಿಲ್ಲ. ಮತ್ತೊಂದೆಡೆ, ಕಳೆದ ವಾರ ಕಂಕೆರ್‌ನಲ್ಲಿ ಬಿಎಸ್‌ಎಫ್‌ ಠಾಣೆ ಮೇಲೆ ನಡೆದ ನಕ್ಸಲ್ ದಾಳಿ ಘಟನೆಗೆ ಸಂಬಂಧಿಸಿದಂತೆ‌ ನಕ್ಸಲ್ ದಂಪತಿಯನ್ನು ಬಂಧಿಸಲಾಗಿದೆ.

ಪಕ್ನಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮುದೇನಾರ್‌ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್ ಯಾದವ್ ಅವರು ತಿಳಿಸಿದ್ದಾರೆ.

ಕೆಳ ಹಂತದ ನಕ್ಸಲ್‌ ನಾಯಕರು ಮುದೇನಾರ್‌ನಲ್ಲಿ ಗ್ರಾಮಸ್ಥರ ಸಭೆ ಕರೆದ ಬಗ್ಗೆ ದೊರೆತ ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ಗ್ರಾಮವನ್ನು ತಲುಪುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿಗೆ ಆರಂಭಿಸಿದರು. ಪೊಲೀಸರು ಪ್ರತಿದಾಳಿ ನಡೆಸಿದ ಬೆನ್ನಲ್ಲೆ, ನಕ್ಸಲರು ಪರಾರಿಯಾದರು. ಸಾವು–ನೋವು ವರದಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ನಕ್ಸಲ್ ದಂಪತಿ ‌ಬಂಧನ: ಮತ್ತೊಂದೆಡೆ, ಕಳೆದ ವಾರ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ದಸ್ರು ಪುಂಗಟಿ ಅಲಿಯಾಸ್‌ ವಿಕ್ರಂ (35) ಹಾಗೂ ಆತನ ಪತ್ನಿ ನಿರ್ಮಲಾ (38) ಅವರನ್ನು ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆ ಪಕ್ಕದ ಬುರ್ಗಿ ಪಿಪಿಲಿ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಬಂಡೆ ಪೊಲೀಸ್‌ ಠಾಣಾ ಅಧಿಕಾರಿ ನರೇಶ್ ದೇಶಮುಖ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.