ರಾಯಪುರ/ನವದೆಹಲಿ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸ್ಫೋಟಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ.
ಯೋಧರು ಇದ್ದ ವಾಹನವನ್ನು 50ಕೆ.ಜಿಗಳಷ್ಟು ಸ್ಫೋಟಕ ಬಳಸಿ ಧ್ವಂಸಗೊಳಿಸಲಾಗಿದೆ. ಕಿಸ್ತಾರಾಮ್–ಪಾಲೋಡಿ ರಸ್ತೆಯ ಬಳಿ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. 212ನೇ ಬೆಟಾಲಿಯನ್ ಯೋಧರು ಕರ್ತವ್ಯದಲ್ಲಿದ್ದಾಗ ಈ ಸ್ಫೋಟ ನಡೆಸಲಾಗಿದೆ. ಇಬ್ಬರು ಯೋಧರು ಗಾಯಗೊಂಡಿದ್ದು ಅವ
ರನ್ನು ರಾಯಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಹನವು ಸುಮಾರು 10ಅಡಿ ಎತ್ತರಕ್ಕೆ ಹಾರಿ ನಂತರ ಭೂಮಿಗೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2017ರ ಮಾರ್ಚ್ ತಿಂಗಳಿನಲ್ಲಿ ಇದೇ ರೀತಿ ದಾಳಿಯ ಮೂಲಕ 12 ಸಿಆರ್ಪಿಎಫ್ ಯೋಧರನ್ನು ಹಾಗೂ ಏಪ್ರಿಲ್ 24ರಂದು ಅರೆಸೇನಾಪಡೆಯ 25 ಯೋಧರನ್ನು ಸುಕ್ಮಾ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿತ್ತು.
ತನಿಖೆಗೆ ಆದೇಶ: ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಾಹನವು ಛಿದ್ರಛಿದ್ರವಾಗಲು ಕಾರಣವೇನು ಎಂಬ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸಿಆರ್ಪಿಎಫ್ ಕೇಂದ್ರ ಕಚೇರಿ, ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಕ್ಷೇತ್ರ ಕಮಾಂಡರ್ಗಳು ಹಾಗೂ ಸ್ಥಳೀಯ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ.
ಹಾಸನದ ಯೋಧ ಬಲಿ
ಹಾಸನ: ಕರ್ತವ್ಯಕ್ಕೆ ತೆರಳುವ ಸಂದರ್ಭ ಛತ್ತೀಸ್ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಕ್ಸಲರು ನಡೆಸಿದ ಬಾಂಬ್ ದಾಳಿಯಲ್ಲಿ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ಯೋಧ ಎಚ್.ಎಸ್.ಚಂದ್ರ (25) ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಚಂದ್ರು ಗ್ರಾಮಕ್ಕೆ ಬಂದು, ಪತ್ನಿಯ ಸೀಮಂತ ಕಾರ್ಯ ಮತ್ತು ಮನೆ ಗೃಹ ಪ್ರವೇಶದಲ್ಲಿ ಪಾಲ್ಗೊಂಡಿದ್ದರು. ಯೋಧನ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ಮೌನ ಮಡುಗಟ್ಟಿದೆ. ಪಾರ್ಥಿವ ಶರೀರ ಬುಧವಾರ ರಾತ್ರಿ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.