ADVERTISEMENT

ನಿಜವಾದ ಗೋರಕ್ಷಕರು ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಹೆದರಬೇಕಿಲ್ಲ: ಮೋಹನ್ ಭಾಗವತ್

ಏಜೆನ್ಸೀಸ್
Published 30 ಸೆಪ್ಟೆಂಬರ್ 2017, 7:34 IST
Last Updated 30 ಸೆಪ್ಟೆಂಬರ್ 2017, 7:34 IST
ಮೋಹನ್‌ ಭಾಗವತ್ (ಸಂಗ್ರಹ ಚಿತ್ರ)
ಮೋಹನ್‌ ಭಾಗವತ್ (ಸಂಗ್ರಹ ಚಿತ್ರ)   

ನವದೆಹಲಿ: ಗೋರಕ್ಷಣೆ ಎಂಬುದು ಧರ್ಮವನ್ನೂ ಮೀರಿದ ವಿಷಯ. ನಿಜವಾದ ಗೋರಕ್ಷಕರು ಸುಪ್ರೀಂ ಕೋರ್ಟ್ ಮತ್ತು ಸರ್ಕಾರಕ್ಕೆ ಹೆದರಬೇಕಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದಸರಾ ಹಬ್ಬದ ನಿಮಿತ್ತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸರಿಯಾದ ಮಾಹಿತಿ ಇಲ್ಲದೆ ಅಥವಾ ಸತ್ಯವನ್ನು ಮರೆಮಾಚಿ ಗೋರಕ್ಷಣೆಯ ಎಲ್ಲ ಚಟುವಟಿಕೆಗಳನ್ನೂ ಹಿಂಸಾಚಾರದ ಘಟನೆಗಳು ಮತ್ತು ಕೋಮು ಹಿಂಸಾಚಾರದ ಜತೆ ತಳಕುಹಾಕಿ ನೋಡುವುದು ಸರಿಯಲ್ಲ. ಅಪರಾಧ, ಹಿಂಸಾ ಕೃತ್ಯಗಳಲ್ಲಿ ಶಾಮೀಲಾಗಿರುವವರು ಹಾಗೂ ನಿಜವಾದ ಗೋರಕ್ಷಕರ ನಡುವೆ ವ್ಯತ್ಯಾಸವಿದೆ’ ಎಂದು ಹೇಳಿದ್ದಾರೆ.

ಗೋರಕ್ಷಣೆ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ನೀಡಿರುವ ಹೇಳಿಕೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಬಗ್ಗೆ ನಿಜವಾದ ಗೋರಕ್ಷಕರು ಹೆದರಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿದೆ ಭಾಗವತ್ ಹೇಳಿದರು. ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೋದಿ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ADVERTISEMENT

ಗೋರಕ್ಷಣೆ ಧರ್ಮವನ್ನೂ ಮೀರಿದ್ದು: ದೇಶದಲ್ಲಿ ಅನೇಕ ಮುಸ್ಲಿಮರೂ ಗೋರಕ್ಷಣೆಯಲ್ಲಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಗೋ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕೆಲಸ, ಗೋಶಾಲೆಗಳನ್ನು ನಡೆಸುವ ಕೆಲಸವನ್ನು ಮುಸ್ಲಿಮರು ಮಾಡುತ್ತಿದ್ದಾರೆ. ಆ ಪೈಕಿ ಕೆಲವರು, ‘ಗೋರಕ್ಷಣೆಯ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ’ ಎಂದು ನನ್ನ ಬಳಿ ತಿಳಿಸಿದ್ದಾರೆ ಎಂದು ಭಾಗವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.