ADVERTISEMENT

ನೆಹರೂ ಚಿಂತನೆಗೆ ಧಕ್ಕೆ: ಸೋನಿಯಾ

ಎನ್‌ಡಿಎ ಹೊರತಾದ ಪಕ್ಷಗಳ ಸೆಳೆಯಲು ಕಾಂಗ್ರೆಸ್‌ ತಂತ್ರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಜವಾಹರಲಾಲ್‌ ನೆಹರೂ ಅವರ ಪರಂಪರೆ ತಮ್ಮದು ಎಂಬುದನ್ನು ಮರು ದೃಢಪಡಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಯತ್ನಿಸಿದರು. ನೆಹರೂ ಅವರ ಚಿಂತನೆಗಳು ‘ವಿಕಾರಗೊಳಿಸುವ ಮತ್ತು ತಿರುಚುವ’ ಅಪಾಯಕ್ಕೆ ಒಳಗಾಗಿವೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಪರೋಕ್ಷ ಟೀಕೆಯನ್ನೂ ಮಾಡಿದರು.

ಎನ್‌ಡಿಎಯೇತರ ಪಕ್ಷ ಒಟ್ಟುಗೂಡಿ ಸುವ ಪ್ರಯತ್ನ ನಡೆಸಿರುವ ಅವರು, ಜಾತ್ಯತೀತ ವಾದ ದೇಶಕ್ಕೆ ಅನಿವಾರ್ಯ ಎಂದು ಹೇಳಿದರು.
ನೆಹರೂ 125ನೇ ಜನ್ಮದಿನದ ಅಂಗ ವಾಗಿ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಸೋನಿಯಾ ಮಾತನಾಡಿದರು.

ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಸಿಪಿಎಂನ ಪ್ರಕಾಶ್‌ ಕಾರಟ್‌, ಸೀತಾರಾಂ ಯೆಚೂರಿ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ,  ಜೆಡಿಯು ಅಧ್ಯಕ್ಷ ಶರದ್‌ ಯಾದವ್‌, ಸಿಪಿಐನ ಡಿ.ರಾಜಾ, ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಡಿ.ಪಿ.ತ್ರಿಪಾಠಿ ಭಾಗ ವಹಿದ್ದರು. ಸಮಾಜವಾದಿ ಪಕ್ಷ, ಬಿಎಸ್‌ಪಿ, ಡಿಎಂಕೆ, ನ್ಯಾಷನಲ್‌ ಕಾನ್ಫರೆನ್ಸ್‌  ಮತ್ತು ಟಿಡಿಪಿ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ.  ಆರ್‌ಜೆಡಿ ಮುಖಂಡ ಲಾಲು ಪ್ರಸಾದ್‌ ಹಾಜರಾಗದಿದ್ದರೂ ಪಕ್ಷದ ಸಂಸದ ಜೈಪ್ರಕಾಶ್‌ ನಾರಾಯಣ್‌ ಯಾದವ್‌ ಬಂದಿದ್ದರು.

ಸಮ್ಮೇಳನದ ಆರಂಭದಲ್ಲಿ ಮಾತ ನಾಡಿದ ಸೋನಿಯಾ, ನೆಹರೂ ಅವರ ಜೀವನ, ಕೆಲಸದ ಬಗೆಗಿನ ತಿಳಿವಳಿಕೆ ಇತ್ತೀಚಿನ ವರ್ಷಗಳಲ್ಲಿ ದುರ್ಬಲವಾಗು ತ್ತಿದೆ ಎಂದರು.

ಜಾತ್ಯತೀತತೆ ಇಲ್ಲದೇ ಭಾರತೀಯತ್ವ, ಭಾರತ ಇಲ್ಲ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಜಾತ್ಯತೀತ ತತ್ವದ ಅಗತ್ಯವಿದೆ ಎಂದು ವಿವರಿಸಿದರು.

ಸಂಸದೀಯ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವ ಮಾತ್ರ ಒಂದು ದೇಶದ ಬಹುಜನಾಂಗೀಯ, ಬಹುಧರ್ಮೀಯ, ಬಹುಭಾಷಿಕ ಮತ್ತು ಬಹುಪ್ರಾದೇಶಿಕ ಸಮಾಜವನ್ನು ಹಿಡಿದಿಡಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.