ಫರಿದಾಬಾದ್/ಹರಿಯಾಣ: ಇಲ್ಲಿನ ಬಾದ್ಷಾ ಖಾನ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಮೊಮ್ಮಗಳ ಶವವನ್ನು ಆಕೆಯ ಅಜ್ಜ ಹೆಗಲ ಮೇಲೆ ಹೊತ್ತೊಯ್ದ ಮನಕಲಕುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಾಲಕಿಯ ಶವವನ್ನು ಹೊತ್ತೊಯ್ಯಲು ಆಡಳಿತ ಮಂಡಳಿ ಆಂಬುಲೆನ್ಸ್ ಸೇವೆ ಒದಗಿಸಲು ನಿರಾಕರಿಸಿದ ಕಾರಣ ಸ್ವತಃ ಅಜ್ಜ ಮೊಮ್ಮಗಳ ಶವವನ್ನು ಹೊತ್ತು ನಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮೊಮ್ಮಗಳಾದ ಲಕ್ಷ್ಮೀ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಗ ಆಕೆಯ ಅಜ್ಜ ಹಾರ್ದಿಕ್ ಮತ್ತು ಕುಟುಂಬ ಚಿಕಿತ್ಸೆಗಾಗಿ ಮೊದಲು ಫರಿದಾಬಾದ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಚಿಕಿತ್ಸೆಗೆ ಸುಮಾರು ₹5 ಸಾವಿರದಿಂದ 6 ಸಾವಿರ ಖರ್ಚಾಗುತ್ತದೆ ಎಂದು ಹೇಳಿದ್ದಾರೆ.
ಅಷ್ಟೊಂದು ಹಣ ಇಲ್ಲದ ಕಾರಣ ಕುಟುಂಬದವರು ಲಕ್ಷ್ಮೀಯನ್ನು ಬಾದ್ಷಾ ಖಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಬಾಲಕಿಯ ಚಿಕಿತ್ಸೆ ಕಡೆ ಗಮನ ಹರಿಸಲಿಲ್ಲ. ಕುಟುಂಬದವರು ಎಷ್ಟೇ ಮನವಿ ಮಾಡಿದರೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮೀ ಸಾವನ್ನಪ್ಪಿದ್ದಾಳೆ ಎಂದು ಅಜ್ಜ ಹಾರ್ದಿಕ್ ಅವರು ಹೇಳಿದ್ದಾರೆ.
‘ಆಗ ವೈದ್ಯರು ಮೃತಪಟ್ಟ ಲಕ್ಷ್ಮೀಯ ಶವವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ನನ್ನ ಬಳಿ ಹಣ ಇಲ್ಲ ಎಂದು ಬೇಡಿದರೂ ಆಂಬುಲೆನ್ಸ್ ಮಾತ್ರ ಒದಗಿಸಲಿಲ್ಲ’ ಎಂದು ಹಾರ್ದಿಕ್ ಅವರು ಅಳಲು ತೋಡಿಕೊಂಡಿದ್ದಾರೆ.
ಅಜ್ಜ ಹಾರ್ದಿಕ್ ಅವರು ಖಾಸಗಿ ಆಂಬುಲೆನ್ಸ್ನಲ್ಲಿ ತೆಗೆದುಕೊಂಡು ಹಣ ಇಲ್ಲದ ಕಾರಣ ಮೃತ ಮೊಮ್ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೊರಟಿದ್ದಾರೆ. ಆಗ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ನೆರವಿನಿಂದ ಖಾಸಗಿ ಆಂಬುಲೆನ್ಸ್ನಲ್ಲಿ ಮನೆಗೆ ತಲುಪಿದ್ದಾರೆ ಎಂದು ಪೊಲೀಸ್ ವಕ್ತಾರ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.