ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನ ಬುಧವಾರ ಕೊನೆಗೊಂಡಿದೆ. ಒಟ್ಟು 29 ದಿನ ನಡೆದ ಅಧಿವೇಶನದಲ್ಲಿ ಲೋಕಸಭೆಯಲ್ಲಿ 24 ಮತ್ತು ರಾಜ್ಯಸಭೆಯಲ್ಲಿ 14 ಮಸೂದೆಗಳಿಗೆ ಅನುಮೋದನೆ ಪಡೆಯಲಾಗಿದೆ.
18 ಮಸೂದೆಗಳಿಗೆ ಉಭಯ ಸದನಗಳಲ್ಲಿ ಅನುಮೋದನೆ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಒಂದು ತಿಂಗಳು ಮುಂಚಿತವಾಗಿ ಆರಂಭವಾಗಿರುವುದೂ ಸೇರಿದಂತೆ ಹಲವು ಮೊದಲುಗಳಿಗೆ ಈ ಬಾರಿಯ ಅಧಿವೇಶನ ಸಾಕ್ಷಿಯಾಗಿದೆ.
ಪ್ರತಿ ವರ್ಷ ಮಾರ್ಚ್ನಲ್ಲಿ ಆರಂಭಗೊಳ್ಳುತ್ತಿದ್ದ ಬಜೆಟ್ ಅನ್ನು ಈ ವರ್ಷ ಒಂದು ತಿಂಗಳು ಮುಂಚಿತವಾಗಿ, ಅಂದರೆ, ಜನವರಿ 31ರಂದು ಆರಂಭಿಸಲಾಗಿತ್ತು. ಮಹತ್ವದ್ದು ಎನ್ನಲಾದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಸೂದೆಗೆ ಈ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದೆ.
ಬಜೆಟ್ಗೆ ಸಂಬಂಧಿಸಿದ ಸಂಪೂರ್ಣ ಹಣಕಾಸು ವ್ಯವಹಾರವನ್ನು ಹಣಕಾಸು ವರ್ಷ ಕೊನೆಗೊಳ್ಳುವ ಅಂದರೆ, ಮಾರ್ಚ್ 31ರ ಮೊದಲೇ ಪೂರ್ಣಗೊಳಿಸಿರುವುದು ಇದೇ ಮೊದಲಾಗಿದೆ. ರೈಲು ಬಜೆಟ್ ಅನ್ನು ಹಣಕಾಸು ಬಜೆಟ್ ಜತೆ ವಿಲೀನಗೊಳಿಸಿರುವುದೂ ಇದೇ ಮೊದಲು.
‘ಈ ಬಾರಿಯ ಅಧಿವೇಶನದಲ್ಲಿ ಒಟ್ಟು 560 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪೈಕಿ 136 ಪ್ರಶ್ನೆಗಳಿಗೆ ಮೌಖಿಕ ಉತ್ತರ ನೀಡಲಾಗಿದೆ. 494 ವಿಷಯಗಳ ಬಗ್ಗೆ ಚರ್ಚಿಸಲಾಗಿದೆ’ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.