ADVERTISEMENT

ಬೆಂಗಳೂರಿನಲ್ಲಿ ಸುಪ್ರೀಂ ಪೀಠಕ್ಕೆ ಸಿಂಧ್ಯಾ ಮನವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 20:01 IST
Last Updated 27 ನವೆಂಬರ್ 2015, 20:01 IST

ನವದೆಹಲಿ: ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸುವಂತೆ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಜೆಡಿಎಸ್‌ ನಾಯಕ ಪಿ.ಜಿ.ಆರ್‌ ಸಿಂಧ್ಯಾ ಮನವಿ ಮಾಡಿದ್ದಾರೆ.

ಕಾನೂನು ಸಚಿವರನ್ನು ಶುಕ್ರವಾರ ಬೆಳಿಗ್ಗೆ ಭೇಟಿ ಮಾಡಿದ್ದ ಸಿಂಧ್ಯಾ, ದಕ್ಷಿಣ ಭಾರತದ ಕಕ್ಷಿಗಾರರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಪೀಠವನ್ನು ಆರಂಭಿಸಬೇಕು ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಮಾಡುವುದರಿಂದ ಒಕ್ಕೂಟ ವ್ಯವಸ್ಥೆಯೂ ಬಲಗೊಳ್ಳಲಿದೆ. ಕಾನೂನು ಸಚಿವರು ತಮ್ಮ ಮನವಿ ಆಲಿಸಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆಯಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕಳಸಾ– ಬಂಡೂರಿ ನಾಲಾ ಯೋಜನೆ ಕುರಿತು ಪ್ರಸ್ತಾಪಿಸಿದ ಮಾಜಿ ಸಚಿವರೂ ಆಗಿರುವ ಸಿಂಧ್ಯಾ, ಮುಂಬೈ– ಕರ್ನಾಟಕ ಭಾಗದಲ್ಲಿ ಮೂರ್ನಾಲ್ಕು ವರ್ಷ ಗಳಿಂದ ಸತತವಾಗಿ ಬರಗಾಲ ತಲೆದೋರಿದ್ದು, ಮಾನವೀಯ ನೆಲೆಯಲ್ಲಿ ಕುಡಿಯುವ ನೀರಿನ ಬೇಡಿಕೆಯನ್ನು ಇತ್ಯರ್ಥಪಡಿಸಬೇಕಾಗಿದೆ ಎಂದು ತಿಳಿಸಿದರು.

ಸಕ್ರಿಯ ರಾಜಕಾರಣದಿಂದ ದೂರ: ತಾವು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದಲ್ಲಿದ್ದು, ವೈಯಕ್ತಿಕ ಕಾರಣಗಳಿಗಾಗಿ ಸಕ್ರಿಯ ರಾಜಕಾರಣದಿಂದ ದೂರವಿರುವುದಾಗಿ ಸ್ಪಷ್ಟಪಡಿಸಿದರು. ಇನ್ನೊಂದು ವರ್ಷ ತಟಸ್ಥವಾಗಿದ್ದು, ಅನಂತರ ರಾಜಕಾರಣದಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌’ ರಾಜ್ಯದ ಮಾಜಿ ಕಮಿಷನರ್‌ ಕೊಂಡಜ್ಜಿ ಬಸಪ್ಪ ಅವರ ಜನ್ಮ ಶತಮಾನೋತ್ಸವವನ್ನು ಶನಿವಾರ ಸಂಜೆ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದ್ದು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲಗೌಡ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಕೈಗಾರಿಕಾ ಖಾತೆ ಸಚಿವ ಜಿ.ಎಂ. ಸಿದ್ದೇಶ್ವರ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಷ್ಟ್ರೀಯ ಮುಖ್ಯ ಕಮಿಷನರ್‌ ಬಿ. ಐ ನಾಗರಾಳೆ ಅವರು ಭಾಗವಹಿಸುವರು ಎಂದು ರಾಜ್ಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಮಿಷನರ್‌ ಆಗಿರುವ ಸಿಂಧ್ಯಾ ನುಡಿದರು.

ಭಾರತ್‌ ಸ್ಕೌಟ್ಸ್‌ ಹಾಗೂ ಗೈಡ್ಸ್‌ನ ಸರೋಜಿನಿ ಹಾಗೂ ಕೊಂಡಜ್ಜಿ ಬಸಪ್ಪನವರ ಪುತ್ರ ಕೊಂಡಜ್ಜಿ ಮೋಹನ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.