ADVERTISEMENT

ಮಂದಿರದ ವಿಷಯದಲ್ಲಿ ಹಿಂದಡಿ ಇಲ್ಲ: ಷಾ

​ಪ್ರಜಾವಾಣಿ ವಾರ್ತೆ
Published 27 ಮೇ 2015, 11:43 IST
Last Updated 27 ಮೇ 2015, 11:43 IST

ಸೂರತ್ (ಪಿಟಿಐ):ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ರಾಮ ಮಂದಿರ ನಿರ್ಮಾಣ, ಸಂವಿಧಾನದ 370 ಕಲಂಗಳಂಥ ತಾತ್ವಿಕ ವಿಚಾರಗಳನ್ನು ಬಿಜೆಪಿ ಕೈಬಿಟ್ಟಿದೆ ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬುಧವಾರ ಅಲ್ಲಗಳೆದಿದ್ದಾರೆ.

‘ರಾಮ ‌ಮಂದಿರ ನಿರ್ಮಾಣದ ವಿಷಯದಲ್ಲಿ ನಾವು ಹಿಂದಡಿ ಇಟ್ಟಿಲ್ಲ. ಸೂಕ್ತ ಸಮಯದಲ್ಲಿ ಪಕ್ಷವು ಒಂದು ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ರಾಮ ಮಂದಿರದ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೀಡುವ ತೀರ್ಪನ್ನು ಪಕ್ಷವು ಈ ಹಿಂದೆ ಹೇಳಿರುವಂತೆ ಅದನ್ನು ಗೌರವಿಸಲಿದೆ. ಪ್ರತಿಯೊಬ್ಬರು ಅದನ್ನು ಗೌರವಿಸಬೇಕು’ ಎಂದು ನುಡಿದಿದ್ದಾರೆ.

ಅಲ್ಲದೇ,‘ಸರ್ವಪಕ್ಷಗಳೊಂದಿಗೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ರಾಮ ಮಂದಿರ ನಿರ್ಮಿಸುವ ಮತ್ತೊಂದು ಮಾರ್ಗವನ್ನೂ ನಾವು ನಂಬಿದ್ದೇವೆ. ನಾವು ಕೋರ್ಟ್‌ ತೀರ್ಪಿನ ಹೊರಗೂ ಒಂದು ಮಾರ್ಗ ಹುಡುಕುತ್ತೇವೆ. ನಮಗೆ ಎರಡೂ ದಾರಿಗಳು ತೆರೆದಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇನ್ನು, ಸಂವಿಧಾನ 370ನೇ ಕಲಂ ಕುರಿತು ಮಾತನಾಡಿದ ಷಾ, ‘ಕಾಶ್ಮೀರ ಸಮಸ್ಯೆಯ ಸಂಬಂಧ ನಾವು ಅಸಹಾಯಕರಾಗಿಲ್ಲ. 370ನೇ ಕಲಂ ಒಂದೇ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸಮಸ್ಯೆಯಲ್ಲ. ಆದರೆ ಅದಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ’ ಎಂದಿದ್ದಾರೆ.

ಮೇ 10ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮಾತನಾಡುತ್ತಾ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಕಾನೂನು ರಚನೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.