ADVERTISEMENT

ರಾಜೀನಾಮೆ ನೀಡಲು ಮುಂದಾದವರು...

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST

ನವದೆಹಲಿ: ಇತ್ತೀಚೆಗೆ ಬೆನ್ನು ಬೆನ್ನಿಗೆ ನಡೆದ ರೈಲು ದುರಂತಗಳ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸುರೇಶ್‌ ಪ್ರಭು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ರೈಲು ದುರಂತಗಳ ನೈತಿಕ ಹೊಣೆ ಹೊತ್ತುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದವರಲ್ಲಿ ಪ್ರಭು ಅವರು ಮೊದಲಿಗರೇನಲ್ಲ.

1956ರಲ್ಲಿ ತಮಿಳುನಾಡಿನ ಅರಿಯಲುರ್‌ನಲ್ಲಿ ಸಂಭವಿಸಿದ ದುರ್ಘಟನೆಯ ಹೊಣೆ ಹೊತ್ತು ಅಂದಿನ ರೈಲ್ವೆ ಸಚಿವ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ದುರಂತದಲ್ಲಿ 150 ಜನರು ಪ್ರಾಣ ಕಳೆದುಕೊಂಡಿದ್ದರು.

1999ರಲ್ಲಿ ಅಸ್ಸಾಂನಲ್ಲಿ ಗೈಸಲ್‌ ರೈಲು ದುರಂತ ಸಂಭವಿಸಿದಾಗ ನಿತೀಶ್‌ ಕುಮಾರ್‌ ಅವರು ಪದತ್ಯಾಗ ಮಾಡಿದ್ದರು. ಆ ದುರ್ಘಟನೆಯಲ್ಲಿ 290 ಮಂದಿ ಬಲಿಯಾಗಿದ್ದರು. 2001ರಲ್ಲಿ ಅವರು ಮತ್ತೆ ರೈಲ್ವೆ ಸಚಿವರಾಗಿದ್ದರು.

ADVERTISEMENT

ಎರಡು ರೈಲು ಅಪಘಾತಗಳ ಹೊಣೆ ಹೊತ್ತು 2000ದಲ್ಲಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಮುಂದಾಗಿದ್ದರು. ಆದರೆ, ಅವರ ಪ್ರಸ್ತಾವವನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ತಳ್ಳಿ ಹಾಕಿದ್ದರು.

ಈ ಬಾರಿ ನಾಲ್ಕು ದಿನಗಳ ಅಂತರದಲ್ಲಿ ಎರಡು ದುರಂತ ಸಂಭವಿಸಿರುವುದು ರೈಲ್ವೆ ಮತ್ತು ಸುರೇಶ್‌ ಪ್ರಭು ಅವರ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟು ಮಾಡಿದೆ.

ಸುರೇಶ್‌ ಪ್ರಭು ಅವರು 2014ರ ನವೆಂಬರ್‌ನಲ್ಲಿ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದುವರೆಗೆ 20 ರೈಲು ಅಪಘಾತಗಳು ಸಂಭವಿಸಿವೆ. 2014–15ರ ಅವಧಿಯಲ್ಲಿ ಒಟ್ಟಾರೆ 346 ಅಪಘಾತಗಳು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.