ಹೈದರಾಬಾದ್ (ಪಿಟಿಐ): ಓಬಳಾಪುರಂ ಗಣಿ ಕಂಪೆನಿ (ಒಎಂಸಿ) ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಲಭಿಸಿರುವ ಬೆನ್ನ ಹಿಂದೆಯೇ ಅವರ ಆಪ್ತ ಮೆಹ್ಫೂಜ್ ಆಲಿ ಖಾನ್ ಅವರಿಗೂ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ರೆಡ್ಡಿಗೆ ಆಪ್ತನಾಗಿದ್ದ ಆಲಿ ಖಾನ್ ಎಲ್ಲ ಅಕ್ರಮಗಳ ಪ್ರಮುಖ ಸೂತ್ರದಾರನಾಗಿ ಕಾರ್ಯನಿರ್ವಹಿಸಿದ್ದ. ‘ಒಎಂಸಿ’ ಕಂಪೆನಿ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಆರೋಪಪಟ್ಟಿಯಲ್ಲಿ ಆಲಿಖಾನ್ ಏಳನೆಯ ಆರೋಪಿ.
10 ಲಕ್ಷ ಮೌಲ್ಯದ ಎರಡು ಭದ್ರತಾ ಠೇವಣಿ ಇರಿಸಬೇಕು. ಪಾಸ್ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ಒಪ್ಪಿಸಬೇಕು ನ್ಯಾಯಾಲಯದ ಒಪ್ಪಿಗೆ ಇಲ್ಲದೆ ದೇಶ ಬಿಟ್ಟು ಹೊರಗೆ ಹೋಗಬಾರದು. ಬಳ್ಳಾರಿ, ಅನಂತಪುರ, ಕಡಪಾ ಜಿಲ್ಲೆಗಳಲ್ಲಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಬಾರದು. ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಬಾರದು. ಈ ಷರತ್ತುಗಳನ್ನು ವಿಧಿಸಿ ಆಲಿಖಾನ್ಗೆ ಜಾಮೀನು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.