ನವದೆಹಲಿ: ‘ಗೂಢಲಿಪಿ’ ಮಾದರಿಯನ್ನು ಪರಿಚಯಿಸಿರುವ ವಾಟ್ಸ್ಆ್ಯಪ್ ಮತ್ತಿತರ ಸಂದೇಶ ವಾಹಕಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಗುರುಗ್ರಾಮ ಮೂಲದ ಆರ್ಟಿಐ ಕಾರ್ಯಕರ್ತ ಸುಧೀರ್ ಯಾದವ್ ಈ ಅರ್ಜಿ ಸಲ್ಲಿಸಿದ್ದು, ಭಾರತೀಯ ಟೆಲಿಗ್ರಾಫ್ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಈ ಸಂದೇಶ ವಾಹಕಗಳನ್ನು ಉಗ್ರರು ಬಳಸಿಕೊಳ್ಳುವ ಮೂಲಕ ದೇಶದ ಭದ್ರತಾ ವ್ಯವಸ್ಥೆಗೆ ಮಾರಕವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ವಾಟ್ಸ್ಆ್ಯಪ್ ಅನ್ನು 2014ರ ಫೆಬ್ರುವರಿಯಲ್ಲಿ ಫೇಸ್ಬುಕ್ ಖರೀದಿ ಮಾಡಿದ್ದು, 2016ರ ಏಪ್ರಿಲ್ 5ರಿಂದ ಅನ್ವಯವಾಗುವಂತೆ, ಮೂರನೇ ವ್ಯಕ್ತಿಯು ಸಂದೇಶವನ್ನು ಓದಲು ಸಾಧ್ಯವಾಗದ ಮಾದರಿಯಲ್ಲಿ ವಾಟ್ಸ್ ಆ್ಯಪ್ ತನ್ನ ಹೊಸ ಆವೃತ್ತಿಯಲ್ಲಿ ಗ್ರಾಹಕರಿಗೆ ‘ಎಂಟ್ ಟು ಎಂಡ್’ ಗೂಢ ಸಂದೇಶ ಸೌಲಭ್ಯವನ್ನು ಒದಗಿಸುತ್ತಿದೆ. ಈ ಬೆಳವಣಿಗೆಯಿಂದಾಗಿ, ಅಪರಾಧ ಪ್ರಕರಣ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಯಲ್ಲಿ ಭಾಗಿಯಾಗುವವರು ನಡೆಸುವ ಸಂವಹನ ಪ್ರಕ್ರಿಯೆಯನ್ನು ಪೊಲೀಸ್ ಮತ್ತಿತರ ತನಿಖಾ ಸಂಸ್ಥೆಗಳು ತಿಳಿಯದಂತಾಗಲಿದೆ ಎಂದು ಅವರು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.