ಮುಂಬೈ (ಪಿಟಿಐ): ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅರೆಪ್ರಜ್ಞಾವಸ್ಥೆಯಲ್ಲಿದ್ದು ಅವರು ಗುಣಮುಖರಾಗಲು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಶನಿವಾರ ತಿಳಿಸಿದ್ದಾರೆ.
‘ಇಂದ್ರಾಣಿ ಸ್ಥಿತಿ ಗಂಭೀರವಾಗಿದೆ, ಆದರೂ ಅವರ ಆರೋಗ್ಯ ಸ್ಥಿರವಾಗಲಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿಡಲಾಗುವುದು’ ಎಂದು ಜೆ.ಜೆ ಆಸ್ಪತ್ರೆಯ ಡೀನ್ ಟಿ.ಪಿ ಲಹಾನೆ ತಿಳಿಸಿದ್ದಾರೆ.
‘ಇಂದ್ರಾಣಿ ಅವರ ಆರೋಗ್ಯದ ಬಗ್ಗೆ ಸಿಬಿಐ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.
ಔಷಧ ಪತ್ತೆಯಾಗಿಲ್ಲ: ಇಂದ್ರಾಣಿ ಅವರ ಹೊಟ್ಟೆಯಲ್ಲಿ ಯಾವುದೇ ಔಷ ಧೀಯ ಅಂಶ ಪತ್ತೆಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಭಾನುವಾರ ವರದಿ ಬರಲಿದ್ದು ಔಷಧ ಸೇವನೆ ಬಗ್ಗೆ ತಿಳಿಲಯಲಿದೆ ಎಂದು ತಿಳಿಸಿದ್ದಾರೆ.
ವಾರದಲ್ಲಿ ಪೂರ್ಣ: ಇಂದ್ರಾಣಿ ಔಷಧ ಅತಿಯಾದ ಬಳಕೆ ಮಾಡಿ ಕೊಂಡಿ ರುವ ತನಿಖೆಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಭೇಟಿಗೆ ಅನುಮತಿ ನಿರಾಕರಣೆ
ಆಸ್ಪತ್ರೆಗೆ ದಾಖಲಾಗಿರುವ ಇಂದ್ರಾಣಿ ಅವರನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಲು ಅವರ ವಕೀಲರಿಗೆ ಆಸ್ಪತ್ರೆಯ ಡೀನ್ ಲಹಾನೆ ಅವಕಾಶ ನೀಡಲಿಲ್ಲ. 43 ವರ್ಷದ ಇಂದ್ರಾಣಿ ಅವರ ಆರೋಗ್ಯದ ಬಗ್ಗೆ ಲಹಾನೆ ವಕೀಲೆ ಗುಂಜನ್ ಮಂಗಲ್ ಅವರಿಗೆ ಮಾಹಿತಿ ನೀಡಿದರು, ಆದರೆ ಭೇಟಿ ಅವಕಾಶ ನಿರಾಕರಿಸಿದರು.
ಇಂದ್ರಾಣಿ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿ ಅವರ ವಕೀಲೆ ಗಂಜನ್ ಮಂಗಳಾ ಸ್ಥಳೀಯ ನ್ಯಾಯಾಲಯ ಮೊರೆ ಹೋಗಿದ್ದಾರೆ. ಇಂದ್ರಾಣಿ ಅವರ ಆರೋಗ್ಯದ ಬಗ್ಗೆ ವರದಿ ಕೇಳಿರುವ ಮ್ಯಾಜಿಸ್ಟ್ರೇಟ್ ಆರ್.ವಿ. ಅದೋನೆ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.