ADVERTISEMENT

ವಿಷಾದ ವ್ಯಕ್ತಪಡಿಸಲು ರಾಹುಲ್‌ ನಕಾರ

ಮಹಾತ್ಮಾ ಗಾಂಧಿ ಹತ್ಯೆಗೆ ಆರ್‌ಎಸ್‌ಎಸ್‌ ಹೊಣೆ ಹೇಳಿಕೆ ವಿವಾದ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ನವದೆಹಲಿ (ಪಿಟಿಐ): ಮಹಾತ್ಮಾ ಗಾಂಧಿ ಅವರ ಹತ್ಯೆಗೆ ಆರ್‌ಎಸ್‌ಎಸ್‌ ಹೊಣೆ ಎಂಬ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬಹುದು ಎಂಬ ಸುಪ್ರೀಂಕೋರ್ಟ್‌ ಸಲಹೆಯನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತಿರಸ್ಕರಿಸಿದ್ದಾರೆ.

ತಮ್ಮ ಹೇಳಿಕೆಗೆ ರಾಹುಲ್‌ ಗಾಂಧಿ ವಿಷಾದ ವ್ಯಕ್ತಪಡಿಸುವ ಮೂಲಕ  ಈ ಪ್ರಕರಣವನ್ನು ಇಲ್ಲಿಯೇ ಇತ್ಯರ್ಥಗೊಳಿ ಸಬಹುದು ಎಂದು ನ್ಯಾಯಮೂರ್ತಿ ಗಳಾದ ದೀಪಕ್‌ ಮಿಶ್ರಾ ಮತ್ತು ಪಿ.ಸಿ. ಪಂತ್‌ ಅವರನ್ನು ಒಳಗೊಂಡ ನ್ಯಾಯಪೀಠವು ಸಲಹೆ ನೀಡಿತು.

ಆದರೆ ಇದನ್ನು ತಿರಸ್ಕರಿಸಿದ ರಾಹುಲ್‌ ಗಾಂಧಿ ಪರ ವಕೀಲ ಕಪಿಲ್ ಸಿಬಲ್‌, ಪ್ರಕರಣದಲ್ಲಿ ವಾದ ಮುಂದು ವರಿಸುವುದಾಗಿ ಹೇಳಿದರು. ಸೊನಾಲೆಯಲ್ಲಿ ಮಾರ್ಚ್‌ 6ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ, ‘ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದು ಆರ್‌ಎಸ್‌ಎಸ್‌ ಜನರು’ ಎಂದು ಹೇಳಿದ್ದಾಗಿ ಭಿವಾಂಡಿ ಆರ್‌ಎಸ್‌ಎಸ್‌ ಘಟಕದ ಕಾರ್ಯದರ್ಶಿ ರಾಜೇಶ್‌ ಕುಂಟೆ ದೂರು ಸಲ್ಲಿಸಿದ್ದರು.

ಈ ಮಾನಹಾನಿ ಪ್ರಕರಣದ ವಿಚಾರಣೆಗೆ ನೀಡಿರುವ ಮಧ್ಯಂತರ ತಡೆಯನ್ನು ಸುಪ್ರೀಂಕೋರ್ಟ್‌ ಗುರುವಾರ ವಿಸ್ತರಿಸಿದೆ. ಪ್ರಕರಣದ ದೂರುದಾರ ರಾಜೇಶ್‌ ಕುಂಟೆ ಅವರಿಗೆ ನಾಲ್ಕು ವಾರಗಳ ಒಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಭಿವಬಾಂಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್‌ ಮೇ 7ರಂದು ತಡೆಯಾಜ್ಞೆ ನೀಡಿತ್ತು. ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣವನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ಹೈಕೋರ್ಟ್‌ ತಳ್ಳಿಹಾಕಿತ್ತು. ಬಳಿಕ ರಾಹುಲ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.