ADVERTISEMENT

ವೀಸಾ ವಂಚನೆ: ದೇವಯಾನಿ ಹೇಳಿಕೆಗೆ ತರಾಟೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಮೆರಿಕದಲ್ಲಿ ಬಂಧನಕ್ಕೊಳ­ಗಾಗಿ ಭಾರಿ ಸುದ್ದಿ ಮಾಡಿದ್ದ ರಾಜ­ತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ಟಿವಿ ಚಾನೆಲ್‌­ವೊಂದಕ್ಕೆ ನೀಡಿರುವ ಸಂದರ್ಶನದ ಹೇಳಿಕೆಯಿಂದ ತೊಂದರೆ ಎದು­ರಿ­ಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

‘ತಾವು ಸ್ವದೇಶಕ್ಕೆ ವಾಪ­ಸ್ಸಾದ ನಂತರ ಬಂಧನದ ಪ್ರಕರಣ­ದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ, ಹೊಸ ಸರ್ಕಾರವು ರಾಜ­ತಾಂತ್ರಿಕ ಅಧಿ­ಕಾರಿ ವಿರುದ್ಧದ ನ್ಯಾಯಾಂಗ ಕ್ರಮ­ವನ್ನು ಗಂಭೀರ­ವಾಗಿ ಪರಿಗಣಿಸಬಹುದು ಎಂಬ ವಿಶ್ವಾಸ ಇದೆ’ ಎಂದು ಹೇಳಿರು­ವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ವಿದೇಶಾಂಗ ಕಚೇರಿಯಲ್ಲಿ ನಿರ್ದೇ­ಶಕರ ದರ್ಜೆಯ ಅಧಿಕಾರಿ ಆಗಿರುವ ದೇವಯಾನಿ ಅವರ ಹೇಳಿಕೆಯು  ವೈಯಕ್ತಿಕ ವಾದುದು ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಟಿವಿ ಸಂದರ್ಶನಕ್ಕೆ ಅವರು ಅನು­ಮತಿ ಪಡೆದಿದ್ದರೆ, ಅನುಮತಿ ನೀಡ­ಲಾ­ಗಿತ್ತೆ ಎಂಬ ಪ್ರಶ್ನೆಗೆ ಅವರು ‘ಇಲ್ಲ’ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣವನ್ನು ಬಗೆಹರಿಸಲು ವಿದೇ­ಶಾಂಗ ಇಲಾಖೆಯು ಬದಲಿ ಮಾರ್ಗ­ವನ್ನು ಹುಡುಕುತ್ತಿರುವ ಸಂದರ್ಭದಲ್ಲಿ ದೇವಯಾನಿ ಹೇಳಿಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ­ಗಳು ಇವೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಭಾರತದ ರಾಯಭಾರ ಕಚೇರಿಯಲ್ಲಿ ಉಪ ಕಾನ್ಸಲ್ ಜನರಲ್ ಆಗಿದ್ದ ದೇವಯಾನಿ ಅವರು ಮನೆಗೆಲಸದವಳ ವೀಸಾ ಬಗ್ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಕಳೆದ ವರ್ಷ ಬಂಧನಕ್ಕೊಳಗಾಗಿದ್ದರು. ನಂತರ 2.5 ಲಕ್ಷ  ಡಾಲರ್ ಭದ್ರತೆ ನೀಡಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.