ಬೆಂಗಳೂರು: ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೇರಳದ ಮೂರು ಕಡೆಗಳಲ್ಲಿ ಸೇವಾ ಮತ್ತು ಮಾಹಿತಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶಬರಿಮಲೆಗೆ ಭೇಟಿ ನೀಡುವ ಕರ್ನಾಟಕದ 50 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳ ಅನುಕೂಲಕ್ಕಾಗಿ ವೈದ್ಯಕೀಯ ಸೌಲಭ್ಯಗಳು, ಸಹಾಯವಾಣಿ, ರಕ್ಷಣೆ ಹಾಗೂ ನೆರವು ನೀಡಲಾಗುತ್ತದೆ.
ಈ ಸಂಬಂಧ ಕಂದಾಯ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ. ಧಾರ್ಮಿಕ ದತ್ತಿ ಇಲಾಖೆಯು ಇದಕ್ಕಾಗಿ ಪ್ರತ್ಯೇಕ ಉಪ ಕಚೇರಿ ಆರಂಭಿಸಲಿದೆ.
ಸಾಮಾನ್ಯವಾಗಿ ಶಬರಿಮಲೆ ಯಾತ್ರೆ ನಡೆಯುವ ಡಿಸೆಂಬರ್ ಮತ್ತು ಜನವರಿಯಲ್ಲಿ 45 ದಿನಗಳ ಕಾಲ ಸೇವಾ ಮತ್ತು ಮಾಹಿತಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ₹25 ಲಕ್ಷಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸಿಗುವ ಸೌಲಭ್ಯ
* ಕೇರಳ ಪ್ರವೇಶಿಸುವ ಮುಖ್ಯ ಸ್ಥಳಗಳಲ್ಲಿ ತಾತ್ಕಾಲಿಕ ಮಾಹಿತಿ ಕೇಂದ್ರ ತೆರೆದು ಶಬರಿ ಮಲೆಗೆ ತೆರಳುವ ಭಕ್ತರಿಗೆ ಅಗತ್ಯ ಮಾಹಿತಿ ನೀಡುವುದು.
* ಪಂಪಾ, ನೀಲಕಲ್, ಕೊಟ್ಟಾಯಂ ಹಾಗೂ ಇತರ ಅವಶ್ಯ ಸ್ಥಳಗಳಲ್ಲಿ ಸೇವಾ, ಮಾಹಿತಿ ಕೇಂದ್ರ ಆರಂಭ.
* ಈ ಕೇಂದ್ರಗಳಲ್ಲಿ ಕನಿಷ್ಠ ವೈದ್ಯಕೀಯ ಸೇವೆ ಕಲ್ಪಿಸುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.